ಗೋಣಿಕೊಪ್ಪಲು, ನ.26: ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ವತಿಯಿಂದ ತಾ.30ರಂದು ನವದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನೆಯು ಉತ್ತರ ಪ್ರದೇಶದ ರೈತ ಚಳವಳಿಯ ಮುಖಂಡ ವಿ.ಎಂ. ಸಿಂಗ್ ನೇತೃತ್ವದಲ್ಲಿ ಡೆಲ್ಲಿ ಚಲೋ ನಡೆಯಲಿದೆ.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದಿಂದ ನೂರಕ್ಕೂ ಅಧಿಕ ರೈತರು ಡೆಲ್ಲಿ ಚಲೋ ರ್ಯಾಲಿಯಲ್ಲಿ ಭಾಗಿಯಾಗಲಿ ದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ರೈತ ಸಂಘದ ಸಭೆಯಲ್ಲಿ ಮಾಹಿತಿ ನೀಡಿದರು. ದ.ಭಾರತದಿಂದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಪ್ರಮುಖ ಪಾತ್ರ ವಹಿಸಲಿದ್ದು ರೈತರ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಲಿದ್ದಾರೆ.

ಡೆಲ್ಲಿ ಚಲೋ ಚಳವಳಿಗೆ ತೆರಳುವ ವಿಚಾರದಲ್ಲಿ ಸಂಘದ ಕಚೇರಿಯಲ್ಲಿ ಏರ್ಪಾಡಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳನ್ನು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು ತಾ.29 ರಂದು ಕೊಡಗಿನ ರೈತರು ಪ್ರಯಾಣ ಬೆಳೆಸಲಿದ್ದು ಪ್ರಮುಖವಾಗಿ ಕರಿಮೆಣಸು ಆಮದು ನೀತಿಯ ವಿರುದ್ಧ ಕೇಂದ್ರದ ವಾಣಿಜ್ಯಮಂತ್ರಿ ಗಳನ್ನು ಭೇಟಿ ಮಾಡಿ ಯಾವದೇ ಕಾರಣಕ್ಕೂ ಜಿಲ್ಲೆಗೆ ವಿಯೆಟ್ನಾಂ ಕರಿಮೆಣಸು ಆಮದು ಮಾಡಿ ಕೊಳ್ಳದಂತೆ ಒತ್ತಾಯಿಸಲಾಗು ವದು ಎಂದರು. ರೈತ ಸಂಘದ ಮುಖಂಡ ಪುಚ್ಚಿಮಾಡ ಸುಭಾಶ್ ಮಾತನಾಡಿ ದೇಶದಾದ್ಯಂತವಿರುವ 204ಕ್ಕೂ ಅಧಿಕ ರೈತ ಪರ ಹೋರಾಟ ಸಮಿತಿಗಳು ಈ ಹೋರಾಟಕ್ಕೆ ಧುಮುಕ್ಕಿದ್ದು 3 ಲಕ್ಷಕ್ಕೂ ಅಧಿಕ ರೈತರು ಜಮಾವಣೆ ಗೊಳ್ಳಲಿದ್ದು ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ರ್ಯಾಲಿಯಲ್ಲಿ ಆಗ್ರಹಿಸಲಾಗುವದು.

ನವದೆಹಲಿಯ ರಾಮಲೀಲಾ ಮೈದಾನಕ್ಕೆ ವಿವಿಧ 10 ಮುಖ್ಯ ದ್ವಾರಗಳಿಂದ ಏಕ ಕಾಲದಲ್ಲಿ ದೇಶದ ಎಲ್ಲಾ ರೈತರು ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಮೃದು ಧೋರಣೆ ಅನುಸರಿಸಿರುವ ಬಗ್ಗೆ, ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗು ವದು ಎಂದರು.

ರೈತ ಸಂಘದ ತಿತಿಮತಿ ಭಾಗದ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ ಕೊಡಗಿನಿಂದ ತೆರಳುತ್ತಿರುವ ನೂರಕ್ಕೂ ಅಧಿಕ ರೈತರನ್ನು ಬರ ಮಾಡಿಕೊಳ್ಳಲಿರುವ ದೆಹಲಿಯ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ ಆತಿಥ್ಯ ನೀಡಲಿದ್ದು ಸ್ವತಃ ಹೋರಾಟದಲ್ಲಿ ಭಾಗಿಗಳಾಗಲಿದ್ದಾರೆ. ಕೊಡಗು ಜಿಲ್ಲೆಯ ರೈತರ ಸಮಸ್ಯೆ ಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಮನವಿ ಪತ್ರ ನೀಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವದು ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹೆಚ್.ಟಿ. ಉಮೇಶ್, ಹೆಚ್.ಯು. ಕಿರಣ್ ಮುಂತಾದವರು ಹಾಜರಿದ್ದರು. - ಹೆಚ್.ಕೆ.ಜಗದೀಶ್