*ಸಿದ್ದಾಪುರ, ನ. 28: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಅಭ್ಯತ್‍ಮಂಗಲ ಗ್ರಾಮಕ್ಕೆ ಸೇರಿದ ಜ್ಯೋತಿ ನಗರದಲ್ಲಿ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯದೆ ಇರುವ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅವರು ಪಿಡಿಓ ಅನಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾ.ಪಂ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಅಭ್ಯತ್‍ಮಂಗಲ ಜ್ಯೋತಿ ನಗರಕ್ಕೆ ಕುಡಿಯುವ ನೀರು, ರಸ್ತೆ, ಚರಂಡಿ, ಮನೆ ವಿದ್ಯುತ್ ಸಂಪರ್ಕಕ್ಕೆ ಪರವಾನಗಿಯನ್ನು ಪಂಚಾಯಿತಿಯಿಂದ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ ಪಿಡಿಓ ಅನಿಲ್ ಬಸವಣ್ಣ ದೇವರ ಸಮಿತಿಯವರು ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವದಾಗಿ ಅಸಹಾಯಕತೆ ತೋಡಿಕೊಂಡರು. ಆನಂತರ ನ್ಯಾಯಾಲಯದ ಆದೇಶದ ಪ್ರತಿ ತರಿಸಿ ಪರಿಶೀಲಿಸಿದಾಗ ಬಾಳೆಗುಂಡಿಗೆ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ತಡೆಯಾಜ್ಞೆ ಇರುವದನ್ನು ಖಾತ್ರಿಪಡಿಸಿಕೊಂಡು ಜ್ಯೋತಿ ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಎಲ್ಲಾ ಕ್ರಮಕೈಗೊಳ್ಳಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಈ ವಿಭಾಗದ ಜನತೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಲಭಿಸದೆ ಇರುವ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು.