ಮಡಿಕೇರಿ, ನ. 29 : ಪ್ರಕೃತಿ ವಿಕೋಪ ಪರಿಹಾರ ಹಾಗೂ ಪುನರ್‍ವಸತಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಲೋಕಾಯುಕ್ತ ಎಡಿಜಿಪಿ ಎ.ಎನ್.ಎಸ್.ಮೂರ್ತಿ ಅವರು ಜಿಲ್ಲಾಡಳಿತದಿಂದ ಮಾಹಿತಿ ಪಡೆದರು.ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾಹಿತಿ ನೀಡಿ ಕೊಡಗು ಜಿಲ್ಲೆಯ 34 ಗ್ರಾ.ಪಂ.ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಯಿತು. ಮನೆ ಹಾನಿ, ಬೆಳೆ ಹಾನಿಯಾಯಿತು. ರಸ್ತೆ ಸಂಪರ್ಕ ಕಡಿದು ಹೋಯಿತು. ಪ್ರವಾಹ ಭೂಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ತಲಾ 3,800 ರೂ. ಪರಿಹಾರ ಭತ್ಯೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಆರಂಭದಲ್ಲಿ 51 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ 7 ಪರಿಹಾರ ಕೇಂದ್ರಗಳಿದ್ದು, 530 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ ಎಂದು ನುಡಿದರು.

ಪ್ರಕೃತಿ ವಿಕೋಪದಿಂದಾಗಿ ಪುನರ್ ವಸತಿ ಕೇಂದ್ರಗಳಿಗೆ 333 ವಿದ್ಯಾರ್ಥಿಗಳು ದಾಖಲಾಗಿದ್ದರು, 62 ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ದಾಖಲಿಸಲಾಗಿದೆ. 177 ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗೆ ದಾಖಲಿಸಲಾಗಿದೆ. ಉಳಿದ 65 ವಿದ್ಯಾರ್ಥಿಗಳು

(ಮೊದಲ ಪುಟದಿಂದ) ಆಯಾಯ ಶಾಲೆಯಲ್ಲಿಯೇ ವ್ಯಾಸಂಗ ಮುಂದುವರಿಸಿದ್ದಾರೆ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಕೂಡಿಗೆ ಜರ್ಸಿತಳಿ ಸಂವರ್ಧನಾ ಕೇಂದ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲಾಗಿದೆ. 10 ಸಾವಿರ ಕೆ.ಜಿ. ಪಶು ಆಹಾರವನ್ನು ದಾಸ್ತಾನಿರಿಸಿ ಗೋಶಾಲೆಯಲ್ಲಿ ಉಪಯೋಗಿಸ ಲಾಗುತ್ತಿದೆ. ಪಶು ಆಹಾರವನ್ನು ದಾಸ್ತಾನಿರಿಸಿ ಗೋಶಾಲೆಯಲ್ಲಿ ಹಾಗೂ ಗ್ರಾಮಗಳಿಗೆ ತೆರಳಿ ವಿತರಿಸಲಾಗಿರುತ್ತದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಒಟ್ಟು 4257 ವಿದ್ಯುತ್ ಕಂಬಗಳು ಹಾನಿಗೊಳ ಗಾಗಿದ್ದು, 4257 ಕಂಬಗಳನ್ನು ಬದಲಾಯಿಸಲಾಗಿದೆ. ಒಟ್ಟು 339 ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗಿದ್ದು, ಎಲ್ಲವನ್ನೂ ಬದಲಾಯಿಸಲಾಗಿದೆ. ಒಟ್ಟು 62.83 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿದ್ದು, ಎಲ್ಲಾ ಮಾರ್ಗಗಳನ್ನು ದುರಸ್ತಿಪಡಿಸಲಾಗಿದೆ.

10 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ, 1 ಲೀ. ಅಡುಗೆ ಎಣ್ಣೆ, 1 ಕೆ.ಜಿ. ತೊಗರಿ ಬೇಳೆ, 1 ಕೆ.ಜಿ. ಉಪ್ಪು ಮತ್ತು 5 ಲೀ. ಸೀಮೆ ಎಣ್ಣೆ ಒಳಗೊಂಡ ಆಹಾರದ ಕಿಟ್‍ಗಳನ್ನು ಜಿಲ್ಲೆಯ 50 ಸಾವಿರ ಸಂತ್ರಸ್ತ ಕುಟುಂಬಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಪ್ರಕೃತಿ ವಿಕೋಪದ ಆರಂಭದ ದಿನಗಳಲ್ಲಿ ಜಿಲ್ಲೆಯ ಎಲ್ಲಾ 104 ಗ್ರಾ.ಪಂ.ಗಳಿಗೆ ತಕ್ಷಣದ ಪರಿಹಾರವಾಗಿ 1 ಬ್ಯಾರೆಲ್ ಸೀಮೆ ಎಣೆ ್ಣಯನ್ನು ಉಚಿತವಾಗಿ ಸರಬರಾಜು ಮಾಡಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಮಡಿಕೇರಿ-ಕಡಮಕಲ್-ಸುಬ್ರಹ್ಮಣ್ಯ ರಸ್ತೆ, ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ -27ರ ರಸ್ತೆ, ಮಾದಾಪುರ-ಬಿಳಿಗೇರಿ-ಕಿರಗಂದೂರು-ತಾಕೇರಿ-ಹಾನಗಲ್ಲು ರಸ್ತೆ, ಸೋಮವಾರಪೇಟೆ-ಹಾನಗಲ್ಲು-ತಳ್ತಾರೆ ಶೆಟ್ಟಳ್ಳಿ-ತಾಕೇರಿ-ಗರ್ವಾಲೆ ರಸ್ತೆ ಹಾಗೂ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಹೀಗೆ ಒಟ್ಟು 620.08 ಕಿ.ಮೀ. ರಸ್ತೆಯು ಭೂಕುಸಿತದಿಂದ ಹಾನಿಗೊಳಗಾಗಿದ್ದು, ದುರಸ್ತಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಜಿ.ಪಂ. ಸಿಇಒ ಲಕ್ಷ್ಮಿ ಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇದ್ದರು.