ಸೋಮವಾರಪೇಟೆ, ನ. 30: ರೋಟರಿ ಕ್ಲಬ್ ಸೋಮವಾರಪೇಟೆ ಹಿಲ್ಸ್ ಆಶ್ರಯದಲ್ಲಿ ಡಿ.2ರಂದು (ನಾಳೆ) ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ರೋಟರಿ ಜಿಲ್ಲಾ ಪದಾಧಿಕಾರಿಗಳ ಕಲಾ ಸಂಗಮ-2018 ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಪಿ.ಕೆ. ರವಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನನಿತ್ಯ ಒತ್ತಡದ ಬದುಕಿನಲ್ಲೂ ಸೇವಾ ಮನೋಭಾವನೆ ಹೊಂದಿರುವ ರೋಟರಿ ಕುಟುಂಬ ಸದಸ್ಯರಿಗೆ ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಕಲಾ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿ.2ರಂದು ಬೆಳಿಗ್ಗೆ 9 ಗಂಟೆಗೆ ಜಾನಕಿ ಸಭಾಂಗಣದಲ್ಲಿ ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಡಿಜಿಇ ಜೋಸೆಫ್ ಮ್ಯಾಥ್ಯೂ, ಡಿಜಿಎನ್ ರಂಗನಾಥ್ ಭಟ್, ಸಾಂಸ್ಕøತಿಕ ಘಟಕದ ಅಧ್ಯಕ್ಷ ಮಹೇಶ್ ಕುಮಾರ್ ನಲ್ವಾಡೆ, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ ಅವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ ರೋಟರಿ ಕ್ಲಬ್‍ಗಳ ಮಟ್ಟದಲ್ಲಿ ನಡೆದಂತಹ ಗೀತೆ ಗಾಯನ, ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ವಿಜೇತರಾದವರು ಕಲಾ ಸಂಗಮದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ರೋಟರಿ ಜಿಲ್ಲೆಗೆ ಒಳಪಡುವ ನಾಲ್ಕು ಜಿಲ್ಲೆಗಳ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಂದು ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಪರ್ಧೆಗಳಲ್ಲಿ ವಿಜೇತರಾಗುವವರಿಗೆ ಬಹುಮಾನ ವಿತರಣೆ ನಡೆಯಲಿದೆ. ಕಲಾ ಸಂಗಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಅನಿಲ್ ಹೆಚ್.ಟಿ. ಅವರುಗಳನ್ನು ಸನ್ಮಾನಿಸಲಾಗುವದು ಎಂದು ಪಿ.ಕೆ. ರವಿ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಹೆಚ್.ಸಿ. ನಾಗೇಶ್, ಬಿ.ಎಸ್. ಸದಾನಂದ್, ಬಿ.ಎಸ್. ಸುಂದರ್, ನಾಗೇಶ್, ಎಸ್.ಎ. ಮುರಳೀಧರ್ ಉಪಸ್ಥಿತರಿದ್ದರು.