ಸುಂಟಿಕೊಪ್ಪ, ನ. 30: ದೇವರ ಹುಂಡಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವ ಗಸ್ತು ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.ತಾ. 29 ರಂದು ರಾತ್ರಿ 10 ಗಂಟೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಗಸ್ತು ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುನೀತ್ ಕುಮಾರ್ ಹಾಗೂ ಪ್ರಮೋದ್ ಅವರು ಪಟ್ಟಣದ ಆಯಕಟ್ಟಿನ ಸ್ಥಳ ಬ್ಯಾಂಕ್, ದೇವಾಲಯ, ಮಾದಾಪುರ ರಸ್ತೆಯ ವೃಕ್ಷೋದ್ಭವ ದೇವಾಲಯದ ಬಳಿ ಬಂದಾಗ ವ್ಯಕ್ತಿಯೋರ್ವ ದೇವಾಲಯದ ಗೇಟಿನ ಬಳಿ ಸುಳಿದಾಡುತ್ತಿರುವದು ಗೋಚರಿಸಿದೆ. ಆತ ದೇವಾಲಯದ ಹುಂಡಿಯನ್ನು ಕತ್ತಿಯಿಂದ ಹೊಡೆಯುತ್ತಿರುವದನ್ನು ಗಮನಿಸಿ ಪೊಲೀಸರಿಬ್ಬರು ಆತನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.

ಮಧುರಮ್ಮ ಬಡಾವಣೆ ನಿವಾಸಿ ಪ್ರಕಾಶ್ ಎಂಬಾತ ಈ ಕೃತ್ಯ ಎಸಗಿದ್ದು, ಈ ಹಿಂದೆ ಮಾದಾಪುರ ರಸ್ತೆಯ ಶಬರಿ ಹೊಟೇಲಿನ ಮಾಲೀಕರ ಪುತ್ರ ಅನಿಲ್ ಎಂಬವರ ಆಟೋರಿಕ್ಷಾ ಸುಟ್ಟು ಹಾಕಿದ ಪ್ರಕರಣದಲ್ಲೂ ಭಾಗಿಯಾಗಿದ್ದು, ಗಾಂಜಾ ಮಾರಾಟ, ಹೊಡೆದಾಟ ಕೇಸಿನಲ್ಲೂ ಪೊಲೀಸರು ಈತನ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.