ಮಡಿಕೇರಿ, ಡಿ. 1: ಕೇಂದ್ರದ ಮಾಜಿ ಸಚಿವರುಗಳಾದ ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರುಗಳ ನಿಧನಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಪ್ರಮುಖರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೌನಾಚರಣೆಯ ಮೂಲಕ ನಾಯಕರುಗಳ ಆತ್ಮಕ್ಕೆ ಶಾಂತಿ ಕೋರಿದರು.

ಈ ಸಂದರ್ಭ ಮಾತನಾಡಿದ ಕೆ.ಪಿ.ಸಿ.ಸಿ. ಸದಸ್ಯ ಟಿ.ಪಿ. ರಮೇಶ್, ಸಾಮಾಜಿಕ ಕಳಕಳಿಯೊಂದಿಗೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಈ ಇಬ್ಬರು ನಾಯಕರ ಜನಪರ ಕಾಳಜಿ ಇತರರಿಗೆ ಮಾದರಿಯಾಗಿತ್ತು ಎಂದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಯು.ಎಂ. ಮುದ್ದಯ್ಯ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕÀ ತೆನ್ನಿರಾ ಮೈನಾ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಸಭಾ ಸದಸ್ಯರುಗಳಾದ ಚುಮ್ಮಿ ದೇವಯ್ಯ, ತಜುಸುಂ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ನಗರ ಉಪಾಧ್ಯಕ್ಷರಾದ ಜಪ್ರುಲ್ಲ, ಶಶಿ, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಕಚೇರಿ ಸಹಾಯಕರಾದ ರಾಣಿ, ಉಷಾ ಮತ್ತಿತರ ಪ್ರಮುಖರು ಹಾಗೂ ಕಾಯರ್ಯಕರ್ತರು ಹಾಜರಿದ್ದರು.

ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.