ಕುಶಾಲನಗರ, ಡಿ. 3: ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಜಿಲ್ಲಾಮಟ್ಟದ ಅಂತರ್ ಶಾಲಾ ವಿಭಾಗದ ಮಾದರಿ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಗಾರ ನಡೆಯಿತು. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನಕ್ಕೆ ವಿದ್ಯಾಸಂಸ್ಥೆಯ ಪ್ರಮುಖರಾದ ಪುಲಿಯಂಡ ರಾಮ್ ದೇವಯ್ಯ ಚಾಲನೆ ನೀಡಿದರು.

ಕೊಡಗು ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಧ ಮಾದರಿ ಪ್ರದರ್ಶಿಸಿದರು.

ವೀರಾಜಪೇಟೆ ಸೆಂಟ್ ಆನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆ ಮತ್ತು ತಂತ್ರಜ್ಞಾನ, ಮಡಿಕೇರಿ ಪವಿತ್ರ ಹೃದಯ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿಗಳ ತಂಡ ಕೃಷಿ ಮತ್ತು ತಂತ್ರಜ್ಞಾನ, ಮೂರ್ನಾಡು ಮಾರುತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆ, ಪಿರಿಯಾಪಟ್ಟಣ ಪುಷ್ಪಾ ಆಂಗ್ಲ ಮಾಧ್ಯಮಶಾಲೆ ವಿದ್ಯಾರ್ಥಿಗಳು ಚರಂಡಿ ನೀರು ಸಂರಕ್ಷಣಾ ಘಟಕ ಸ್ಥಾಪನೆ, ಗೋಣಿಕೊಪ್ಪ ಕಾಪ್ಸ್ ಶಾಲಾ ವಿದ್ಯಾರ್ಥಿಗಳು ಕೌಶಲ್ಯ ಭಾರತ ನಿರ್ಮಾಣ, ಕೂಡಿಗೆ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ತಂಡ ಬಿದಿರು ಹುಲ್ಲು ಸಂಚಾರ ಸಿಗ್ನಲ್ ಮುಕ್ತ ರಸ್ತೆಗಳ ಕುರಿತು, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ತಂಡ ಉತ್ತಮ ರಸ್ತೆಗಳು, ಕೃಷಿ ಮತ್ತು ತಂತ್ರಜ್ಞಾನ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ತಂತ್ರಜ್ಞಾನ, ಶಕ್ತಿ ಸಂರಕ್ಷಣೆ, ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ತಂಡ ಆಕ್ವಾಪೋನಿಕ್ ಮಾದರಿ, ಅತ್ತೂರು ಜ್ಞಾನಗಂಗಾ ವಸತಿ ಶಾಲೆ ವಿದ್ಯಾರ್ಥಿಗಳ ತಂಡ ಶಿಕ್ಷಣ ಮತ್ತು ತಂತ್ರಜ್ಞಾನ ಕುರಿತು ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇರಿಸಿದ್ದರು. ತೀರ್ಪುಗಾರರಾಗಿ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಟಿ.ಕೆ.ಮಂಜುಳಾ, ಕುಶಾಲನಗರ ಕನ್ನಡಭಾರತಿ ಪಿಯು ಕಾಲೇಜಿನ ಉಪನ್ಯಾಸಕಿ ಕೆ.ಟಿ.ಕೃಪಾ ಕಾರ್ಯನಿರ್ವಹಿಸಿದರು.

ವಸ್ತುಪ್ರದರ್ಶನದ ಸಂಯೋಜಕರಾಗಿ ವಿಜ್ಞಾನ ಶಿಕ್ಷಕಿ ಎಚ್.ಪಿ.ರಂಜಿನಿ ಮತ್ತು ತಂಡ ಕಾರ್ಯನಿರ್ವಹಿಸಿದರು. ಈ ಸಂದರ್ಭ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತ ಪದ್ಮನಾಭ, ಟ್ರಸ್ಟಿ ಟಿ.ಕೆ.ಸುಧೀರ್ ಇದ್ದರು.

ಚರ್ಚಾಸ್ಪರ್ಧೆ ಕಾರ್ಯಕ್ರಮ : ಅಂತರ್ ಜಿಲ್ಲಾಮಟ್ಟದ ಚರ್ಚಾಸ್ಪರ್ಧೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ 11 ಶಾಲಾ ತಂಡಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನ ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ತಂಡ ಪಡೆಯಿತು. ಕೂಡಿಗೆ ಸೈನಿಕ ಶಾಲಾ ವಿದ್ಯಾರ್ಥಿಗಳ ತಂಡ ದ್ವಿತೀಯ ಹಾಗೂ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲಾ ತಂಡ ತೃತೀಯ ಸ್ಥಾನಗಳಿಸಿದವು. ತೀರ್ಪುಗಾರರಾಗಿ ಮಡಿಕೇರಿ ಪಿಯು ಕಾಲೇಜಿನ ಆಂಗ್ಲ ಉಪನ್ಯಾಸಕಿ ಎಸ್.ಡಿ.ಅನಿತಾ, ಸೆಂಟ್ ಜೋಸೆಫ್ ಪಿಯು ಕಾಲೇಜಿನ ಉಪನ್ಯಾಸಕಿ ತೇಜಸ್ವಿನಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮ ಸಂಯೋಜಕರಾಗಿ ಶಿಕ್ಷಕಿ ಪದ್ಮವತಿ ಕಾರ್ಯನಿರ್ವಹಿಸಿದರು.