ವೀರಾಜಪೇಟೆ, ಡಿ. 2: ಮೂರು ವರ್ಷಗಳ ಹಿಂದೆ ಕುಟ್ಟಂದಿ ಗ್ರಾಮದಲ್ಲಿ ನಡೆದ ಇಲ್ಲಿನ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೇರಂಡ ಸಾಬು ನಾಣಯ್ಯ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಚೇರಂಡ ಮೋಹನ್ ಎಂಬಾತನನ್ನು ಎರಡನೇ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ಕೊಲೆ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ.

ತಾ. 7.9.2015ರಂದು ಬೆಳಿಗ್ಗೆ ಸಾಬು ನಾಣಯ್ಯ ಎಂದಿನಂತೆ ಕಾಫಿ ತೋಟಕ್ಕೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಎದುರು ಬದಿಯಿಂದ ಬಂದ ಸಾಬು ನಾಣಯ್ಯ ಅವರ ಸಹೋದರನ ಮಗ ಮೋಹನ್ ಸ್ಕೂಟರ್‍ನ್ನು ಅಡ್ಡಗಟ್ಟಿ, ಕೋವಿಯಿಂದ ನೇರವಾಗಿ ತಲೆ ಹಾಗೂ ಮುಖದ ಭಾಗಕ್ಕೆ ಗುಂಡು ಹೊಡೆದು ಕೊಲೆ ಮಾಡಿದನೆಂದು ಆರೋಪಿಸಿ ಗ್ರಾಮಾಂತರ ಪೊಲೀಸರು ಮೋಹನ್‍ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಆ ಮೇರೆಗೆ ವಿಚಾರಣೆ ನಡೆದು ಕೃತ್ಯದ ಬಗ್ಗೆ ಸೂಕ್ತ ಸಾಕ್ಷ್ಯಗಳು ಇಲ್ಲದ್ದರಿಂದ ಆರೋಪಿಯನ್ನು ಮುಕ್ತಗೊಳಿಸಲಾಗಿದೆ. ಆರೋಪಿ ಪರ ವಕೀಲ ಬಿ.ಆರ್. ಶೆಟ್ಟಿ ವಾದಿಸಿದರು.