ಸೋಮವಾರಪೇಟೆ, ಡಿ. 3: ಇಲ್ಲಿನ ರೋಟರಿ ಕ್ಲಬ್ ಸೋಮವಾರ ಪೇಟೆ ಹಿಲ್ಸ್ ವತಿಯಿಂದ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಲಯ ಮಟ್ಟದ ರೋಟರಿ ಜಿಲ್ಲಾ ಕುಟುಂಬಗಳ ಕಲಾ ಸಂಗಮ-2018 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಲ್ಕು ಜಿಲ್ಲೆಗಳ ಸದಸ್ಯರುಗಳು ತಮ್ಮ ಕಲಾ ಪ್ರತಿಭೆಗಳನ್ನು ಒರೆಗೆ ಹಚ್ಚಿದರು. ಗೀತೆಗಾಯನ, ಗುಂಪು ಗಾಯನ, ಮೂಕ ಪಾತ್ರಾಭಿನಯ, ನಾಟಕ ಸ್ಪರ್ಧೆಗಳಲ್ಲಿ ವೃತ್ತಿಪರ ಕಲಾವಿದರಂತೆ ತಮ್ಮನ್ನು ತೊಡಗಿಸಿಕೊಂಡು, ಬಹುಮಾನಕ್ಕೆ ಭಾಜನರಾದರು.

ಮಂಗಳೂರಿನಿಂದ ಆಗಮಿಸಿದ್ದ ರೋಟರಿ ಸದಸ್ಯರು ತಮ್ಮ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದರು. ಯಕ್ಷಗಾನದ ನೃತ್ಯರೂಪಕ ಆಕರ್ಷಕವಾಗಿತ್ತು. ಬೆಳ್ತಂಗಡಿ, ಪುತ್ತೂರು, ಮಂಗಳೂರು, ಗೋಣಿಕೊಪ್ಪ, ಕುಶಾಲನಗರ ಹಾಗೂ ಸೋಮವಾರಪೇಟೆಯ ರೋಟರಿ ಕುಟುಂಬ ಸದಸ್ಯರು ಸಂಭ್ರಮದಿಂದ ಕಲಾ ಸಂಗಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯಲ್ಲಿ ಸದಸ್ಯರ ನಡುವೆ ಒಡನಾಟ ಹೆಚ್ಚಿಸುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸಿವೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ವಲಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿದ್ದು, ಇದೀಗ ಸೋಮವಾರಪೇಟೆ ಕ್ಲಬ್‍ನ ನೇತೃತ್ವದಲ್ಲಿ ರೋಟರಿ ಜಿಲ್ಲಾ ಮಟ್ಟದ ಕಲಾ ಸಂಗಮ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದು ಸಂಸ್ಥೆಯ ಸದಸ್ಯರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರ ತರಲು ಸಹಕಾರಿಯಾಗಲಿದೆ ಎಂದರು.

ಕಲಾ ಸಂಗಮ ಸ್ಪರ್ಧೆಯಲ್ಲಿ ರೋಟರಿ ಜಿಲ್ಲೆಗೆ ಒಳಪಡುವ ನಾಲ್ಕು ಜಿಲ್ಲೆಗಳ ಸದಸ್ಯರುಗಳು ರೋಟರಿ ಕ್ಲಬ್‍ಗಳ ಮಟ್ಟದಲ್ಲಿ ಕಲಾ ಸಂಗಮದ ಸ್ಪರ್ಧೆಗಳಲ್ಲಿ ನಡೆದಂತಹ ಗೀತೆ ಗಾಯನ, ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳು ಭಾಗವಹಿಸಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಅನಿಲ್ ಹೆಚ್.ಟಿ. ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ರೋಟರಿ ಸೋಮವಾರಪೇಟೆ ಹಿಲ್ಸ್ ಅಧ್ಯಕ್ಷ ಪಿ.ಕೆ. ರವಿ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಡಿಜಿಇ ಜೋಸೆಫ್ ಮ್ಯಾಥ್ಯೂ, ವಲಯ ಕಾರ್ಯದರ್ಶಿ ಕ್ರಜ್ವಲ್ ಕೋಟ್ಸ್, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ, ಸಾಂಸ್ಕøತಿಕ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್‍ಕುಮಾರ್ ನಲ್ವಾಡೆ, ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಸುಂದರ್, ಸಂತೋಷ್ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಪಿ. ನಾಗೇಶ್, ಸಾಂಸ್ಕøತಿಕ ಸಮಿತಿಯ ತಾಲೂಕು ಘಟಕದ ಕಾರ್ಯದರ್ಶಿ ಎಸ್.ಎ. ಮುರಳೀಧರ್ ಉಪಸ್ಥಿತರಿದ್ದರು.