ಮಡಿಕೇರಿ, ಡಿ. 3: ಮಡಿಕೇರಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ, ಇದುವರೆಗೆ ಮೂಲಭೂತ ಸೌಕರ್ಯ ಸೇರಿದಂತೆ ಸಮರ್ಪಕ ಪರಿಹಾರ ಲಭಿಸಿಲ್ಲ ಎಂದು ಇಂದು ಜರುಗಿದ ತಾ.ಪಂ. ಸಭೆಯಲ್ಲಿ ತೀವ್ರ ಅಸಮಾಧಾನದೊಂದಿಗೆ, ರಾಜ್ಯ ಸರಕಾರದಿಂದ ತುರ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟಿಸಲು ನಿರ್ಧರಿಸ ಬೇಕೆಂಬ ಒತ್ತಾಯ ಕೇಳಿ ಬಂತು.ತಾ.ಪಂ.ನ ಆಡಳಿತಾರೂಢ ಸದಸ್ಯರುಗಳಾದ ನಾಗೇಶ್ ಕುಂದಲ್ಪಾಡಿ, ಶ್ರೀಧರ್, ರಾಯ್ ತಮ್ಮಯ್ಯ, ಇಂದಿರಾ, ಉಮಾಪ್ರಭು, ಕುಮುದ ಹಾಗೂ ಸಂಧ್ಯಾ ಅವರುಗಳು ಪ್ರತಿಭಟಿಸುವದರೊಂದಿಗೆ, ಕೆಲಹೊತ್ತು ಕಲಾಪ ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ಎದುರಾಯಿತು. (ಮೊದಲ ಪುಟದಿಂದ) ಕಳೆದ ನಾಲ್ಕು ತಿಂಗಳು ಬಳಿಕವೂ ಸರಕಾರ ಯಾವದೇ ನೆರವು ಕಲ್ಪಿಸಿಲ್ಲ; ನಿರಾಶ್ರಿತರಿಗೆ ಕನಿಷ್ಟ ರೂ. 3800 ಮೊತ್ತ ಕೂಡ ತಲಪಿಲ್ಲವೆಂದು ಗಂಭೀರ ಆರೋಪ ಮಾಡಿದರು.

ತಾಲೂಕು ಪಂಚಾಯಿತಿಯಿಂದ ಜನಪ್ರತಿನಿಧಿಗಳು ಏನೂ ಮಾಡಲಾರದ ಅಸಹಾಯಕತೆ ಎದುರಾಗಿರುವಾಗ ತಾವೇಕೆ ಸದಸ್ಯರಾಗಿ ಇರಬೇಕು; ಈ ಕೂಡಲೇ ರಾಜೀನಾಮೆಯೊಂದಿಗೆ ಪ್ರತಿಭಟನೆ ಸಲ್ಲಿಸುವ ಮೂಲಕ ಧರಣಿ ಮಾಡಬೇಕೆಂದು ಪಟ್ಟು ಹಿಡಿದರು. ತಪ್ಪಿದಲ್ಲಿ ಮುಂದಿನ ಹೋರಾಟ ದಿನಾಂಕ ಪ್ರಕಟಿಸುವಂತೆ ಬೇಡಿಕೆ ಮಂಡಿಸಿದರು.

ಜಿಲ್ಲಾಡಳಿತ ನಿರ್ಲಕ್ಷ್ಯ : ಕೊಡಗಿನ ಜನಪ್ರತಿನಿಧಿಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವ ಜಿಲ್ಲಾಡಳಿತ ಇದುವರೆಗೆ ನೈಜ ಫಲಾನುಭವಿಗಳನ್ನು ಗುರುತಿಸಿಲ್ಲ; ಮಾತ್ರವಲ್ಲದೆ ಅರ್ಹರಿಗೆ ಪರಿಹಾರ ಕೂಡ ಕಲ್ಪಿಸಿಲ್ಲ; ಜನಪ್ರತಿನಿಧಿಗಳಿಗೆ ಉತ್ತರಿಸಲು ಸಾಧ್ಯವಾಗಿಲ್ಲ; ರಸ್ತೆ, ಕುಡಿಯುವ ನೀರು, ಮನೆಗಳನ್ನು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಆಗಿಲ್ಲವೆಂದು ಟೀಕಾ ಪ್ರಹಾರ ನಡೆಸಿದರು.

ಅವೈಜ್ಞಾನಿಕ ವರದಿ : ಕೊಡಗಿನಲ್ಲಿ ವಿಪರೀತ ಮಳೆಯಿಂದಾಗಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಮಾನವ ನಿರ್ಮಿತ ಹೇಗೆಂದು ಪ್ರಶ್ನಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಮನುಷ್ಯ ಮಳೆ ಭರಿಸಿ ಭೂಕುಸಿತವೆಸಗಿರುವದೇ? ಎಂದು ಖಾರವಾಗಿ ಪ್ರಶ್ನಿಸಿದರು. ಇಂತಹ ಅವೈಜ್ಞಾನಿಕ ವರದಿಯನ್ನು ಅಧಿಕಾರಿಗಳು ತಯಾರಿಸಿ, ಸರಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಟೀಕಿಸುತ್ತಾ, ಆ ಮಾತ್ರಕ್ಕೆ ಸರಕಾರ ಈ ತನಕ ಯಾವದೇ ಹಣ ಬಿಡುಗಡೆಗೊಳಿಸದೆ ಜನರನ್ನು ವಂಚಿಸಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಎಲ್ಲಾ ಕಾರಣಗಳಿಂದ ನಿಖರ ಫಲಾನುಭವಿಗಳನ್ನು ಗುರುತಿಸಿ ಎಲ್ಲರಿಗೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ, ಜನಪ್ರತಿನಿಧಿಗಳಿಂದಲೇ ಮುಖ್ಯಮಂತ್ರಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವದು ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅವರ ಕಾರ್ಯವೈಖರಿ ಖಂಡಿಸಿ ಧರಣಿ ನಡೆಸುವ ತೀರ್ಮಾನ ಕೈಗೊಳ್ಳಬೇಕೆಂದರು.

ಈ ಬೇಡಿಕೆಗಳೊಂದಿಗೆ ಹೊರ ನಡೆದ ಸದಸ್ಯರನ್ನು ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹಿಂಬಾಲಿಸಿ, ತಮ್ಮ ಕೊಠಡಿಯಲ್ಲಿ ಮನವೊಲಿಸುವದರೊಂದಿಗೆ, ಇಂದಿನ ಸಭೆ ಮುಂದುವರಿಸಲು ಭಿನ್ನವಿಸಿದರು. ಆ ವೇಳೆಗೆ ಶಾಸಕ ಕೆ.ಜಿ. ಬೋಪಯ್ಯ ಕೂಡ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ ಮೇರೆಗೆ ಕಲಾಪ ಮತ್ತೆ ಆರಂಭವಾಯಿತು.

ಮುಂದುವರಿದ ಸಭೆಯಲ್ಲಿ ವಿವಿಧ ಇಲಾಖೆಗಳ ಅನುಪಾಲನಾ ವರದಿ, ಅಭಿವೃದ್ಧಿ ಸಂಬಂಧ ಚರ್ಚೆಗಳು, ಸರಕಾರದ ಕಾರ್ಯಕ್ರಮಗಳ ಅನುಷ್ಠಾನ, ಫಲಾನುಭವಿಗಳ ಗುರುತಿಸುವಿಕೆ, ಅಂಗನವಾಡಿ ಮಕ್ಕಳು, ಶಾಲಾ ಶಿಕ್ಷಣ, ಮಹಿಳಾ ಅಭಿವೃದ್ಧಿ, ಮಾತೃ ಯೋಜನೆ, ಗರ್ಭಿಣಿ, ಬಾಣಂತಿಯರ ಆರೋಗ್ಯ ಸಂಬಂಧ ಚರ್ಚಿಸಲಾಯಿತು.

ಅಲ್ಲದೆ, ತಾ.ಪಂ. ವ್ಯಾಪ್ತಿಯ ಬೇಕು ಬೇಡಿಕೆಗಳು ಎಲ್ಲ ಗ್ರಾ.ಪಂ.ಗಳ ವ್ಯಾಪ್ತಿಯ ಜನತೆಯ ಸಂಕಷ್ಟಕ್ಕೆ ಜಿಲ್ಲಾಧಿಕಾರಿ ಸ್ಪಂದಿಸುವ ನಿಟ್ಟಿನಲ್ಲಿ ಗಮನ ಸೆಳೆಯಲು ನಿರ್ಧಾರ ಕೈಗೊಳ್ಳಲಾಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲ್ ಗಣಪತಿ, ಸದಸ್ಯ ಅಪ್ರು ರವೀಂದ್ರ, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಸೇರಿದಂತೆ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.