ಆಲೂರು ಸಿದ್ದಾಪುರ, ಡಿ. 4: ಆಲೂರುಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 26 ಲಕ್ಷ ರೂ. ಶಾಸಕ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆಯಿಂದ 26 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಶಾಸಕ ರಂಜನ್ ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿಂ.ಪಂ.ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಮಾತನಾಡಿದರು. ಈ ಸಂದರ್ಭ ಶಾಲೆಯಲ್ಲಿ 3 ಲಕ್ಷ 90 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ಅಕ್ಷರ ದಾಸೋಹದ ನೂತನ ಕೊಠಡಿಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು.

ಶಂಕುಸ್ಥಾಪನಾ ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಲೀಲಾವತಿ ಮಹೇಶ್, ಜಿ.ಪಂ.ಮುಖ್ಯ ಇಂಜಿನಿಯರ್ ವೀರೇಂದ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಫೀಟರ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುರೇಂದ್ರ, ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರಮೂರ್ತಿ, ಪ್ರಮುಖರಾದ ಪಿ.ಎನ್.ಗಂಗಾಧರ್ ಮತ್ತು ಗ್ರಾ.ಪಂ.ಯ ಸದಸ್ಯರುಗಳು ಹಾಜರಿದ್ದರು. ಈ ಸಂದರ್ಭ ಶಾಸಕರು ಜಿ.ಪಂ.ಸದಸ್ಯೆ ಸರೋಜಮ್ಮ, ತಾ.ಪಂ.ಸದಸ್ಯೆ ಲೀಲಾವತಿ ಮತ್ತು ಮಾಜಿ ಗ್ರಾ.ಪಂ.ಸದಸ್ಯ ಪಿ.ಎನ್.ಗಂಗಾಧರ್ ಅವರುಗಳನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.