ಕುಶಾಲನಗರ/ ಕೂಡಿಗೆ, ಡಿ. 4: ಸಾಲಬಾಧೆಯಿಂದ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಮೀಪದ ಗೊಂದಿಬಸವನ ಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಬೆಳಗ್ಗಿನ ಜಾವ ಗೊಂದಿಬಸವನಹಳ್ಳಿ ನಿವಾಸಿಯಾದ ಸ್ವಾಮಿನಾಯಕ ಎಂಬವರ ಪತ್ನಿ ಕೂಲಿಕಾರ್ಮಿಕಳಾದ ತಾಯಮ್ಮ (35) ಹಾಗೂ ಈಕೆಯ ಮಗಳಾದ ಗೊಂದಿಬಸವನಹಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಾನವಿ (10) ಜಾರುಗುಪ್ಪೆ ಕ್ವಾರಿಯಲ್ಲಿ ತುಂಬಿದ್ದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಹುಣಸೂರು ತಾಲೂಕಿನ ಮೋದೂರು ಹಾಗೂ ರಾಮನಗರದ ನಿವಾಸಿಗಳಾದ ಸ್ವಾಮಿನಾಯಕ ಹಾಗೂ ತಾಯಮ್ಮ, ಕೂಲಿ ಕೆಲಸ ಮಾಡುತ್ತಿದ್ದು, ಖಾಸಗಿ ಸಂಘ ಸಂಸ್ಥೆಗಳಿಂದ ಪಡೆದಿದ್ದ ಸಾಲಬಾಧೆಯಿಂದ ತಾಯಿ ಮಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪ್ರಬಾರ ಠಾಣಾಧಿಕಾರಿ ಜಗದೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಗಳನ್ನು ಮೇಲೆತ್ತಿದರು.