ಮಡಿಕೇರಿ, ಡಿ. 5: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಕ್ರಿಕೆಟ್ ಹಬ್ಬವನ್ನು ಈ ಬಾರಿಯ ಪ್ರಕೃತಿ ವಿಕೋಪ ದಿಂದಾಗಿ ಸರಳವಾಗಿ ಅಚರಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂದ್ಯಾಟ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವನ್ನು ರದ್ದುಪಡಿಸಿದರೆ ನಂತರ ಮುಂದುವರಿಸಲು ಕಷ್ಟವಾಗಬಹುದೆಂಬ ಹಿನ್ನೆಲೆಯಲ್ಲಿ ಅದ್ಧೂರಿತನವಿಲ್ಲದೆ ಸರಳವಾಗಿ ಸೀಮಿತ ದಿನಗಳಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಯಾವ ರೀತಿ ನಡೆಸಬೇಕೆಂಬ ಬಗ್ಗೆ ಹಿರಿಯರ, ಅನುಭವಿಗಳ ಅಭಿಪ್ರಾಯ ಸಂಗ್ರಹಿಸಿ ಮುನ್ನಡಿಯಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಇದರೊಂದಿಗೆ ವೇದಿಕೆಯ ಇನ್ನಿತರ ಕಾರ್ಯಚಟುವಟಿಕೆ ಬಗ್ಗೆ ಚರ್ಚಿಸಲಾಯಿತು. ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ನಿರ್ದೇಶಕರುಗಳು ಹಾಜರಿದ್ದರು.