ಮಡಿಕೇರಿ, ಡಿ. 5: ಮುಂದಿನ ಮುಂಗಾರು ಮಳೆಗೆ ಮಣ್ಣು ಕುಸಿಯದಂತೆ ರಸ್ತೆಗೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ಮುಂಗಾರು ಮಳೆಗಾಲದ ಅವಧಿಯಲ್ಲಿ ಪ್ರಸಕ್ತ ವರ್ಷ ಸುರಿದ ಅರ್ಧದಷ್ಟು ಮಳೆಯಾದರೂ ಬರೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ನಿರ್ಮಿಸುವಾಗ ತಡೆಗೋಡೆ ಹಾಗೂ ಚರಂಡಿಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸಲಹೆ ಮಾಡಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಚುರುಕಾಗಿ ಕೆಲಸ ನಡೆಯಿತು. ಆದರೆ ಇತ್ತೀಚೆಗೆ ಆಮೆಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿದೆ. ಆದ್ದರಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದಂತೆ ಈ ಸಂದರ್ಭ ದಲ್ಲಿಯೂ ಸಹ ಸಮಾರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿರ್ದೇಶನ ನೀಡಿದರು.

ಮತ್ತೊಂದು ಮಳೆಗೆ ಮುನ್ನ ಮುಂದಿನ ಐದು ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಅನ್ಬುಕುಮಾರ್ ಸೂಚನೆ ನೀಡಿದರು.

ಸರ್ಕಾರ ತಮ್ಮ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿದೆ. ಕಾಮಗಾರಿ ಚುರುಕು ಪಡೆಯದಿದ್ದರೆ ಹೊಣೆ ಯಾರು, ಆದ್ದರಿಂದ ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಹಣ ಬಳಕೆ ಮಾಡಬೇಕು. ಯಾವದೇ ರೀತಿಯ ಲೋಪ ಕಂಡು ಬರದಂತೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.

ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಹಲವು ಸಮಸ್ಯೆಗಳು ಉಂಟಾದವು. ಹಲವು ಕುಟುಂಬಗಳು ಮನೆ- ಮಠ ಕಳೆದುಕೊಂಡು ನಿರಾಶ್ರಿತರಾದರು, ಬೆಳೆ ಹಾನಿ, ಸಾರಿಗೆ ಸಂಪರ್ಕ ಕಡಿತಗೊಂಡಿತು. ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ತೊಂದರೆ ಉಂಟಾಯಿತು. ಪ್ರವಾಸೋದ್ಯಮ ಇಳಿಮುಖವಾಯಿತು. ಹೀಗೆ ಹಲವು ರೀತಿಯ ಸಮಸ್ಯೆಗಳು ಉಲ್ಬಣಗೊಂಡವು. ಆದ್ದರಿಂದ ರಸ್ತೆ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಯಾವದೇ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರದಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ನಿರ್ದೇಶನ ನೀಡಿದರು.

ಸಣ್ಣ ಮತ್ತು ಬೃಹತ್ ನೀರಾವರಿ ಕಾಮಗಾರಿಗಳು, ನಗರಾಭಿವೃದ್ಧಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸೇರಿದಂತೆ ಎಲ್ಲಾ ಕಾಮಗಾರಿಗಳ ಚಿತ್ರಣ ಸಹಿತ ಮಾಹಿತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‍ಐಸಿ) ವೆಬ್‍ಸೈಟ್‍ನಲ್ಲಿ ಅಪ್‍ಡೇಟ್ ಮಾಡಬೇಕು. ಇದರಲ್ಲಿ ಕಾಮಗಾರಿಯ ವೆಚ್ಚ ಮತ್ತಿತರ ಅಂಶ ಒಳಗೊಂಡಿರಬೇಕು ಎಂದು ಅವರು ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ ಎಷ್ಟು ಮನೆಗಳು ಹಾನಿಯಾಗಿವೆ, ಪೂರ್ಣ ಮನೆ ಹಾನಿ, ಭಾಗಶಃ ಮನೆ ಹಾನಿಗಳು ಎಷ್ಟು, ಈಗಾಗಲೇ ಎಷ್ಟು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ, ಬಾಕಿ ಎಷ್ಟು ಎಂಬ ನಿಖರ ಮಾಹಿತಿ ಒದಗಿಸುವಂತೆ ಅವರು ಸೂಚನೆ ನೀಡಿದರು.

ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಕಾಮಗಾರಿ ವೇಗವನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಮಾತನಾಡಿ ಬೆಳೆ ಹಾನಿ ಸಂಬಂಧಿಸಿದಂತೆ ಈಗಾಗಲೇ ಸರ್ವೇ ಕಾರ್ಯ ನಡೆದಿದ್ದು, ಬೆಳೆ ಹಾನಿ ಬಗ್ಗೆ ಬಿಟ್ಟು ಹೋಗಿದ್ದಲ್ಲಿ ಸರ್ವೆ ಮಾಡಿ ಸೇರಿಸುವಂತೆ ಅವರು ಸಲಹೆ ಮಾಡಿದರು.

ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್, ಜಯ, ಲೋಕೋಪಯೋಗಿ ಇಲಾಖೆ ಎಇಇ ನಟೇಶ್, ಜಿ.ಪಂ. ಇಇ ರೇವಣ್ಣವರ್ , ಸೆಸ್ಕ್ ಇಇ ಸೋಮಶೇಖರ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಡಿಎಚ್‍ಒ ರಾಜೇಶ್, ಜಗದೀಶ್ ತಹಶೀಲ್ದಾರರು ಇತರರು ಹಲವು ಮಾಹಿತಿ ನೀಡಿದರು.