ಮಡಿಕೇರಿ, ಡಿ. 5: ಕೊಡಗು ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ನಗರದ ಬಾಲಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಅವರೇ ಮುಂದುವರೆಯುವಂತೆ ಸಭೆಯಲ್ಲಿ ಸದಸ್ಯರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಎಂ.ಹೆಚ್. ನಜೀರ್ ಅಹಮ್ಮದ್, ಸೋಮಯ್ಯ ಹಾಗೂ ದಾಮೋದರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಹಮ್ಮದ್ ಮಾತನಾಡಿ, ಸಂಘದ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವದು ಎಂದು ಭರವಸೆ ನೀಡಿದರು. ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕುಂಞಪ್ಪ ಮಾತನಾಡಿ, ಇದೀಗ ನಿವೃತ್ತ ಸರಕಾರಿ ನೌಕರರ ಸಂಘದಲ್ಲಿ ಹಿರಿಯರೇ ಹೆಚ್ಚಾಗಿದ್ದಾರೆ. ಹೊಸದಾಗಿ ನಿವೃತ್ತಿಗೊಂಡವರು ಸಂಘದ ಸದಸ್ಯರಾಗುತ್ತಿಲ್ಲ. ಆದ್ದರಿಂದ ನಿವೃತ್ತಿಯಾಗುತ್ತಿರುವವರು ಸಂಘದ ಸದಸ್ಯತ್ವವವನ್ನು ಪಡೆದುಕೊಳ್ಳಲು ಮುಂದಾಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ 84 ವರ್ಷ ಪ್ರಾಯದ ದಾಮೋದರ್ ಅವರು ಕೊಳಲು ನುಡಿಸುವ ಮೂಲಕ ಮೆಚ್ಚುಗೆಗಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಈರಪ್ಪ, ಪೂವಮ್ಮ, ಕಾರ್ಯದರ್ಶಿ ಮಾದಮ್ಮಯ್ಯ, ಸಹ ಕಾರ್ಯದರ್ಶಿ ಎನ್.ಎ. ಕಸ್ತೂರಿ ಇತರರಿದ್ದರು.