ಮಡಿಕೇರಿ, ಡಿ. 5: ಜಿಲ್ಲೆಯ ಭೂ ಕುಸಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ತೀರಾ ವಿಳಂಬವಾಗುತ್ತಿದೆ ಎಂದು ಆರೋಪದ ನಡುವೆ ಸಂತ್ರಸ್ತರ ಹೋರಾಟ ಸಮಿತಿಯೂ ರಚನೆಗೊಂಡಿದ್ದು ಹೋರಾಟಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದೆ. ಜಿಲ್ಲೆಯ ಭೂ ಕುಸಿತ ಸಂತ್ರಸ್ತರಿಗಾಗಿ ಸರ್ಕಾರದ ಆಹ್ವಾನದ ಮೇರೆಗೆ ವಿವಿಧ ಕಂಪೆನಿಗಳು 6 ಮನೆಗಳ ಮಾದರಿಗಳನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳಿಸಿಕೊಟ್ಟಿದ್ದವು. ಅವುಗಳಲ್ಲಿ ರಾಜ್ಯ ಸರ್ಕಾರದ ಅಧೀನದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವಿನೂತನ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮನೆಯ ಮಾದರಿ ಪ್ರಥಮವಾಗಿ ಆಯ್ಕೆಯಾಗಿದೆ. ನಾಳೆ ಸಂತ್ರಸ್ತರ ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಿದ ಬಳಿಕ ಜಿಲ್ಲೆಯ 840 ಸಂತ್ರಸ್ತರಿಗಾಗಿ ಈ ಮಾದರಿಯ ಮನೆಗಳು ವಿವಿಧೆಡೆಗಳಲ್ಲಿ ನಿರ್ಮಾಣಗೊಳ್ಳಲಿವೆ.

ಈ ಮನೆಗಳ ವಿಶೇಷತೆ ಏನೆಂದರೆ ಇವುಗಳ ಮೇಲೆ ಅಪಾರ ಪ್ರಮಾಣದ ಮಣ್ಣು ಕುಸಿದರೂ ಇವು ಕುಸಿಯುವದಿಲ್ಲ. ಇತರ ಸಾಂಪ್ರದಾಯಿಕ ತಾರಸಿ ಮನೆಗಳ ನಿರ್ಮಾಣದಲ್ಲಿ ಪಿಲ್ಲರ್‍ಗಳನ್ನು ಬಳಸಲಾಗಿದ್ದರೆ ಇದರಲ್ಲಿ ಪಿಲ್ಲರ್ ಇರುವದಿಲ್ಲ. ಆರ್ ಸಿ.ಸಿ. ಛಾವಣಿಗೆ ಬಳಸಲಾಗಿರುವ ಕಬ್ಬಿಣದ ಕಂಬಿಗಳು ಗೋಡೆಯಿಂದ ನೆಲದವರೆಗೂ ಇಳಿದಿವೆ. ಅಂದರೆ 40 ಅಡಿ ಕಬ್ಬಿಣದ ರಾಡನ್ನೇ ತುಂಡರಿಸದೇ ಹಾಗೆಯೇ ಬಾಗಿಸಿ ಬಳಸಲಾಗಿದೆ. ಇದರಿಂದ ಮನೆ ಹೆಚ್ಚು ಗಟ್ಟಿ ಮುಟ್ಟಾಗಿದ್ದು ಯಾವದೇ ಭಾಗದಿಂದ ಮನೆಗೆ ಒತ್ತಡ ಅಪ್ಪಳಿಸಿದರೂ ತಾಳಿಕೆಯ ಸಾಮಥ್ರ್ಯ ಬಹಳ ಹೆಚ್ಚು ಎನ್ನಲಾಗಿದೆ.

ರಾಜೀವ್ ವಸತಿ ನಿಗಮ ಇದೇ ತಂತ್ರಜ್ಞಾನದಲ್ಲಿ ಕನಕಪುರ ಹಾಗೂ ಇತರೆಡೆಗಳಲ್ಲಿ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ನಿರ್ಮಿಸಿದ್ದು ಕೊಡಗಿನಲ್ಲಿ ಸಂತ್ರಸ್ತರಿಗೆ ತಲಾ 9.85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಎರಡು ಬೆಡ್ ರೂಮುಗಳ ಮನೆ ನಿರ್ಮಾಣ ಮಾಡಲಾಗುತಿದ್ದು ಇದು ದೇಶದಲ್ಲೇ ಪ್ರಥಮ ಎಂದು ಪುನರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾದಿಕಾರಿ ಎಂ ಕೆ ಜಗದೀಶ್ ಅವರು ಹೇಳುತ್ತಾರೆ. ಏಕೆಂದರೆ ಈವರೆಗೂ ದೇಶದಲ್ಲಿ ಸಂತ್ರಸ್ತರಿಗೆ ಸಿಂಗಲ್ ಬೆಡ್ ರೂಮಿನ ಮನೆಗಳನ್ನು ಮಾತ್ರ ನಿರ್ಮಿಸಲಾಗುತಿದ್ದು ಇದೇ ಮೊದಲ ಬಾರಿಗೆ ಎರಡು ಬೆಡ್ ರೂಂ ಗಳನ್ನು ನಿರ್ಮಿಸಲಾಗುತ್ತಿದೆ. ಅಷ್ಟೇ ಅಲ್ಲ ಈ ಮನೆಗಳ ಮೇಲ್ಚಾವಣಿಯನ್ನು ಸಮತಟ್ಟಾಗಿ ನಿರ್ಮಿಸಲಾಗುತಿದ್ದು ಇದರಿಂದಾಗಿ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇದರ ಮೇಲೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಬಹುದಾಗಿದೆ.

ಮನೆ ನಿರ್ಮಾಣದ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ ಯೋಜನಾ ನಿರ್ದೆಶಕ ಹೆಚ್ ಶ್ರೀನಿವಾಸ್ ಅವರು ಇಡೀ ಮನೆಯು 5 ರಿಂದ 6 ಇಂಚಿನಷ್ಟು ಕಾಂಕ್ರೀಟ್ ಗೋಡೆಯನ್ನು ಹೊಂದಿದ್ದು ಇದರ ನಿರ್ಮಾಣದಲ್ಲಿ ಕಲ್ಲು ಅಥವಾ ಇಟ್ಟಿಗೆಯನ್ನು ಬಳಸುವದಿಲ್ಲ ಎಂದರು. ಇಡೀ ಮನೆಯೇ ಕಾಂಕ್ರೀಟಿನ ಕೋಶದಂತಿದ್ದು ಮೊನೊಲಿಥಿಕಲ್‍ನಂತೆ ಇದ್ದು ಇದು ಸಂಪೂರ್ಣ ಭೂಕಂಪ ನಿರೋಧಕವಾಗಿದೆ ಎಂದರು. ಮನೆಗಳ ನಿರ್ಮಾಣಕ್ಕೆ ಸಂಪೂರ್ಣವಾಗಿ ಇತರ ಕಾಂಕ್ರೀಟ್ ನಿರ್ಮಾಣಕ್ಕೆ ಬಳಸುವಂತೆಯೇ ಕಬ್ಬಿಣದ ಮೌಲ್ಡ್‍ಗಳನ್ನು ಬಳಸಲಾಗುವದು. ಈ ಮೌಲ್ಡ್‍ಗಳನ್ನು ಬಿಚ್ಚಿದ ಕೂಡಲೇ ಮನೆ ನಿರ್ಮಾಣವಾದಂತೆಯೇ ಎಂದು ಶ್ರೀನಿವಾಸ್ ಹೇಳಿದ್ದು ಈ ಮನೆಯ ನಿರ್ಮಾಣಕ್ಕೆ 20 ದಿನ ತಗುಲಲಿದೆ ಎಂದರು.

ಈ ಮನೆಯ ಕಾಂಕ್ರೀಟ್ ಗೋಡೆಗಳ ನಿರ್ಮಾಣದ ಸಂದರ್ಭದಲ್ಲೇ ವಿದ್ಯುತ್ ಸಂಪರ್ಕದ ಹಾಗೂ ನೀರಿನ ಪೈಪ್‍ಗಳನ್ನೂ ಅಳವಡಿಸುವದರಿಂದ ವೆಚ್ಚವೂ ಕಡಿಮೆ ಹಾಗೂ ಶೀಘ್ರವಾಗಿ ಆಗಲಿದೆ ಎಂದೂ ಅವರು ಹೇಳಿದರು. ಮನೆಯ ಕಿಟಕಿಗಳಿಗೆ ಅಲ್ಯೂಮಿನಿಯಂ ಹಾಗೂ ಬಾಗಿಲುಗಳಿಗೆ ಪರಿಸರ ಸ್ನೇಹಿ ಮರ ಬಳಸಲಾಗುವದು ಎಂದರು. ಈ ಮಾದರಿಯ ಭೂಕಂಪ ನಿರೋಧಕ ಮನೆಗಳನ್ನು ವಿಶ್ವಾದ್ಯಂತ ನಿರ್ಮಿಸಲಾಗುತಿದ್ದು ರಾಜೀವ್ ವಸತಿ ನಿಗಮ 2012 ರಿಂದ ರಾಜ್ಯದಲ್ಲಿ ಸುಮಾರು 3500 ಮನೆಗಳನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದ ವಸತಿ ನಿಗಮವು ಆಂಧ್ರ ರಾಜ್ಯಾದ್ಯಂತ ಇಂತಹ 4 ಲಕ್ಷ ಮನೆಗಳನ್ನು ನಿರ್ಮಿಸಿದೆ. - ಕೋವರ್‍ಕೊಲ್ಲಿ ಇಂದ್ರೇಶ್