ಸೋಮವಾರಪೇಟೆ, ಡಿ. 5: ಸಾಲಬಾಧೆಯಿಂದ ಜೀವನದಲ್ಲಿ ಬೇಸತ್ತ ವೃದ್ಧ ದಂಪತಿಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ಇಂದು ನಡೆದಿದೆ.ತಾಕೇರಿ ಗ್ರಾಮದ ಕಾಫಿ ಬೆಳೆಗಾರರಾದ ಎಸ್.ಎಂ.ಅಪ್ಪಯ್ಯ (81), ಪತ್ನಿ ಬೊಳ್ಳಮ್ಮ (75) ಮೃತಪಟ್ಟವರು. ಇಂದು ಮಧ್ಯಾಹ್ನದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದಂಪತಿಗಳು ನೇಣಿಗೆ ಶರಣಾಗಿದ್ದು, ಏಣಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ತೆರಳಿ ಪತಿ ಸಿಲ್ವರ್ ಮರಕ್ಕೆ ಹಾಗೂ ಪತ್ನಿ ಹುಳಿ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಮಗ ಮತ್ತು ಸೊಸೆ ಪಟ್ಟಣದಲ್ಲಿ (ಮೊದಲ ಪುಟದಿಂದ) ನಡೆದ ಮದುವೆ ಸಮಾರಂಭಕ್ಕೆ ತೆರಳಿದ ನಂತರ ದಂಪತಿಗಳು ನೇಣು ಬಿಗಿದುಕೊಂಡಿದ್ದಾರೆ. ಸಂಜೆ ಮನೆಯಲ್ಲಿ ಪೋಷಕರು ಇಲ್ಲದ್ದನ್ನು ಅರಿತ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸೋಮವಾರಪೇಟೆ ಠಾಣೆಯ ವೃತ್ತನಿರೀಕ್ಷಕ ನಂಜುಂಡೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪ್ರಸಕ್ತ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೃಷಿ ಫಸಲು ಹಾಳಾಗಿದ್ದು, ಕಾಫಿ, ಕಾಳುಮೆಣಸು ಫಸಲು ನಾಶವಾಗಿದೆ. ಐಗೂರು ಕೃಷಿಪತ್ತಿನ ಸಹಕಾರ ಸಂಘದಲ್ಲಿ 4 ಲಕ್ಷ ರೂ. ಸಾಲ ಇದ್ದು, ಫಸಲು ನಾಶದಿಂದ ಸಾಲ ಮರುಪಾವತಿಯ ಬಗ್ಗೆ ತಂದೆ ತಾಯಿ ಆತಂಕಗೊಂಡಿದ್ದರು ಎಂದು ಪುತ್ರ ಕಾಳಪ್ಪ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರು ಓರ್ವ ಪುತ್ರ ಹಾಗೂ 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.