ಗೋಣಿಕೊಪ್ಪ ವರದಿ, ಡಿ. 19: ಕೊಡವ ಸಂಸ್ಕøತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಯಮುಡಿಯಲ್ಲಿ ನಡೆಸಲು ಉದ್ದೇಶಿಸಿರುವ ಕೊಡವ ಸಾಂಸ್ಕøತಿಕ ಮೇಳದಲ್ಲಿ ಕೊಡವ ಭಾಷಿಗರ ಕಲೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಬಿಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕೊಡವ ಸಾಂಸ್ಕøತಿಕ ಮೇಳ ಸಂಚಾಲಕ ಹಾಗೂ ಕೊಡವ ಅಕಾಡೆಮಿ ಸದಸ್ಯ ಆಪಟ್ಟೀರ ಟಾಟು ಮೊಣ್ಣಪ್ಪ ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕಾವೇರಿ ಅಸೋಸಿಯೇಷನ್, ಗೋಣಿಕೊಪ್ಪ ಕೊಡವ ಸಮಾಜ, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಹಾಗೂ ಕಂಗಳತ್ತ್‍ನಾಡ್ ಅಮ್ಮಕೊಡವ ಸಂಘದ ಸಹಯೋಗದಲ್ಲಿ ತಾ. 24 ರಂದು ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಒಂದು ದಿನದ ಕಾರ್ಯಕ್ರಮ ಅಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕೊಡವ ಭಾಷಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡವ ಸಾಂಪ್ರದಾಯಿಕ ಮೆರವಣಿಗೆ, ಗ್ರಾಮದ ಸೇವಕರಿಗೆ ಸನ್ಮಾನ, ವಿಚಾರ ಮಂಡನೆ, ಸಾಂಸ್ಕøತಿಕ ಪ್ರದರ್ಶನ ಇಂತಹವುಗಳು ಮೇಳೈಸಲಿವೆ. ಶಾಲಾ ಆವರಣದಲ್ಲಿರುವ ವೇದಿಕೆಗೆ ಕೊಡಗಿನ ಹಿರಿಯ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಹೆಸರಿಡುವ ಮೂಲಕ ಅವರಿಗೆ ಗೌರವ ನೀಡಲಾಗುತ್ತಿದೆ ಎಂದರು.

ಅಂದು ಬೆಳಿಗ್ಗೆ 9 ಗಂಟೆಗೆ ರಾಮಮಂದಿರದಿಂದ ಸಾಂಸ್ಕøತಿಕ ಮೆರವಣಿಗೆ ಮೂಲಕ ಚಾಲನೆ ನೀಡಲಾಗುವದು. ಕಾಪಳ ನೃತ್ಯ, ಕುಡಿಯರ ಕಲಾ ತಂಡಗಳು ಪಾಲ್ಗೊಳ್ಳಲಿವೆ. ನಂತರ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮಾಯಮುಡಿ ಗ್ರಾಮದ ಹಿರಿಯ ಸೇವಕರುಗಳಾದ ಸಣ್ಣುವಂಡ ಜಿ. ನಾಚಯ್ಯ, ಚಿರಿಯಪಂಡ ರಾಜಾ ನಂಜಪ್ಪ, ಬಾನಂಡ ಅಪ್ಪಣಮಯ್ಯ, ಕಾಳಪಂಡ ಟಿಪ್ಪುಬಿದ್ದಪ್ಪ, ಚೆಪ್ಪುಡೀರ ರಾಧ ಅಚ್ಚಯ್ಯ, ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಮಲ್ಲಂಡ ಪಿ. ದೇವಯ್ಯ, ಐಚೇಟೀರ ಪೊನ್ನಪ್ಪ ಇವರುಗಳನ್ನು ಸನ್ಮಾನಿಸಲಾಗುವದು ಎಂದರು.

‘ಕೊಡವ ಸಂಸ್ಕøತಿರ ಬೊಳ್‍ಚೆಕ್ ಕೊಡವ ಭಾಷಿಗರ ಕೊಡುಗೆ’ ವಿಷಯದಲ್ಲಿ ಹಿರಿಯ ಸಾಹಿತಿ ನಾಗೇಶ್ ಕಾಲೂರು ವಿಚಾರ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸಾಂಸ್ಕøತಿಕ ಪ್ರದರ್ಶನ ನಡೆಯಲಿದೆ. ಮಂದತ್ತವ್ವ ತಂಡದಿಂದ ಅಜ್ಜಪಂಡ ತಂಡ್ ಎಂಬ ಕಾರ್ಯಕ್ರಮ ಮೆರಗು ನೀಡಲಿದೆ. ಇದರೊಂದಿಗೆ ಬಾಳೋಪಾಟ್, ತಾಲಿಪಾಟ್, ಸಂಬಂಧ ಅಡುಕುವೊ, ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಕಪ್ಪೆಯಾಟ್, ಉಮ್ಮತ್ತಾಟ್, ಉರ್‍ಟಿಕೊಟ್ಟ್ ಆಟ್, ಕುಡಿಯ ಜನಾಂಗದ ಜಾನಪದ ನೃತ್ಯ, ಲಯನ್ಸ್ ಶಾಲಾ ತಂಡದ ಕೊಡವ ಆಟ್ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6 ಕ್ಕೆ ಕೊಡವ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮಾತನಾಡಿ, ಮಾಯಮುಡಿ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಕೊಡವ ಮೇಳ ನಡೆಯುತ್ತಿರುವದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಕೊಡವ ಸಂಸ್ಕøತಿ, ಆಚಾರ-ವಿಚಾರಗಳನ್ನು ಮುಟ್ಟಿಸಲು ಸಹಕಾರಿಯಾಗಲಿದೆ ಎಂದರು.

ಅಖಿಲ ಅಮ್ಮಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಮೂಲನಿವಾಸಿ ಜನಾಂಗದವರು ಮೇಳದಲ್ಲಿ ಪಾಲ್ಗೊಳ್ಳಬೇಕಿದೆ. ಪರಸ್ಪರ ಜೊತೆ ಸೇರಿ ಸಂಸ್ಕøತಿಯನ್ನು ಕಣ್ತುಂಬಿಕೊಳ್ಳಬೇಕಿದೆ ಎಂದರು.

ಸಭಾ ಕಾರ್ಯಕ್ರಮ

ಅಂತರಾಷ್ಟ್ರೀಯ ಕರಾಟೆಪಟು ಚೆಪ್ಪುಡೀರ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್, ಗೋಣಿಕೊಪ್ಪ ಕೊಡವ ಸಮಾಜ ಅಧ್ಯಕ್ಷ ಚೆಕ್ಕೇರ ಪಿ. ಸೋಮಯ್ಯ, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಅಧ್ಯಕ್ಷೆ ರಾಧಾ ಅಚ್ಚಯ್ಯ, ಗ್ರಾ.ಪಂ. ಅಧ್ಯಕ್ಷೆ ಬಲ್ಯಂಡ ಭವಾನಿ ಮೋಹನ್, ಅಖಿಲ ಅಮ್ಮಕೊಡವ ಸಮಾಜ ಗೌ. ಅಧ್ಯಕ್ಷ ಬಾನಂಡ ಪ್ರಥ್ಯು, ನಾಲ್‍ನಾಡ್ ಕುಡಿಯ ಜನಾಂಗ ಅಧ್ಯಕ್ಷ ಕುಡಿಯರ ಮುತ್ತಪ್ಪ, ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಸವಿತಾ ಸಮಾಜ ಅಧ್ಯಕ್ಷ ವೇದಪಂಡ ಬಿ. ಕಿರಣ್, ಕೊಡವ ಸಮಾಜ ಅಧ್ಯಕ್ಷ ಜಿಲ್ಲಂಡ ಮೇದಪ್ಪ, ಗ್ರಾ. ಪಂ. ಸದಸ್ಯ ಆಪಟೀರ ಎಸ್. ನಾಚಯ್ಯ ಪಾಲ್ಗೊಳ್ಳಲಿದ್ದಾರೆ.

ಸಂಜೆ 5 ಕ್ಕೆ ನಡೆಯುವ ಸಮಾರೋಪದಲ್ಲಿ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ, ಕೊಡವ ಭಾಷಿಗ ಜನಾಂಗ ಅಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಸಮಾಜ ಸೇವಕ ಸಣ್ಣುವಂಡ ಎಂ. ವಿಶ್ವನಾಥ್, ಐರಿ ಸಮಾಜ ಅಧ್ಯಕ್ಷ ಮೇಲತಂಡ ಎ. ರಮೇಶ್, ಸಮಾಜ ಸೇವಕ ಸಣ್ಣುವಂಡ ಬಿ. ರಮೇಶ್, ಗ್ರಾ. ಪಂ. ಸದಸ್ಯರುಗಳಾದ ಚೆಪ್ಪುಡೀರ ಪ್ರದೀಪ್, ಟಿಪ್ಪು ಬಿದ್ದಪ್ಪ ಪಾಲ್ಗೊಳ್ಳಲಿದ್ದಾರೆ.

ಕಾವೇರಿ ಅಸೋಸಿಯೇಷನ್ ಉಪಾಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ನಿರ್ದೇಶಕ ಪುಚ್ಚಿಮಾಡ ರಾಯ್ ಗೋಷ್ಠಿಯಲ್ಲಿದ್ದರು.