ಮಡಿಕೇರಿ, ಫೆ.16 :ಸಿದ್ದಾಪುರ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದÀ ಕಾರ್ಮಿಕ ಕುಟುಂಬದ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ತಾ.18 ರಂದು ಸಿದ್ದಾಪುರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ಆದಿ ದ್ರಾವಿಡ ಸಮಾಜ ಸೇವಾ ಸಂಘ ತಿಳಿಸಿದೆ.

ಸಂಘÀದ ಜಿಲ್ಲಾ ಉಪಾಧ್ಯಕ್ಷ ಜಿ.ಕುಶಾಲಪ್ಪ ಮಾತನಾಡಿ ಪಶ್ಚಿಮ ಬಂಗಾಳದ ಕಾರ್ಮಿಕರಿಬ್ಬರಿಂದ ಅಮಾಯಕ ವಿದ್ಯಾರ್ಥಿನಿ ಹತ್ಯೆಯಾಗಿರುವ ಘಟನೆಯನ್ನು ಖಂಡಿಸುವದಾಗಿ ತಿಳಿಸಿದರು. ಅಂದು ಬೆಳಗ್ಗೆ 11.30 ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಲಿದ್ದು, ವಿದ್ಯಾರ್ಥಿನಿ ನೆಲೆಸಿದ್ದ ಎಮ್ಮೆಗುಂಡಿ ಎಸ್ಟೇಟ್ ವ್ಯವಸ್ಥಾಪಕರು ಮತ್ತು ಕೊಲೆ ಮಾಡಿದ ಕಾರ್ಮಿಕರು ನೆಲೆಸಿದ್ದ ಕರಡಿಗೋಡು ತೋಟದ ಮಾಲೀಕರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸ ಲಾಗುವದು, ಇದು ಸಾಧ್ಯವಾಗದಿದ್ದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಲಾಗುವದೆಂದರು.

ಮೃತ ವಿದ್ಯಾರ್ಥಿನಿಯ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು ಮತ್ತು ಪ್ರಸ್ತುತ ಲೈನ್ ಮನೆಯಲ್ಲಿ ವಾಸವಿರುವ ಸಂತ್ರಸ್ತ ಕುಟುಂಬಕ್ಕೆ ಗ್ರಾಮ ಪಂಚಾಯ್ತಿ ಮನೆ ನಿರ್ಮಿಸಿಕೊಡುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸಬೇಕೆಂದು ಕುಶಾಲಪ್ಪ ಇದೇ ಸಂದರ್ಭ ಮನವಿ ಮಾಡಿದರು.

ಗಲ್ಲು ಶಿಕ್ಷೆಯಾಗಲಿ

ವಿದ್ಯಾರ್ಥಿನಿಯನ್ನು ಹತ್ಯೆಗೈದು ಇದೀಗ ಬಂಧಿಸಲ್ಪಟ್ಟಿರುವ ಇಬ್ಬರು ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡ ಬೇಕೆಂದು ಅವರು ಒತ್ತಾಯಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯ ಕಾಫಿ ಎಸ್ಟೇಟ್‍ಗಳಲ್ಲಿ ಅಸ್ಸಾಂ ಮತ್ತು ಪಶ್ಚಿಮಬಂಗಾಳದಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲೆಸಿದ್ದು, ಮಾದಕ ವಸ್ತುಗಳ ಸೇವನೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಎಷ್ಟು ಮಂದಿ ಇಂತಹ ಕಾರ್ಮಿಕರು ಇದ್ದಾರೆ ಎನ್ನುವ ಬಗ್ಗೆ ಯಾವದೇ ಸ್ಪಷ್ಟ ಮಾಹಿತಿಗಳಿಲ್ಲ. ಕೊಲೆ, ಕಳವು ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಇಂತಹ ಕಾರ್ಮಿಕರನ್ನು ಜಿಲ್ಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿದರು.

ಇನ್ನಾದರೂ ತೋಟ ಮಾಲೀಕರು ತಮ್ಮಲ್ಲಿ ಕೆಲಸಕ್ಕಿರುವ ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.

ಜಿಲ್ಲಾ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಆದಿ ದ್ರಾವಿಡ ಸಮಾಜದ ಬಂಧುಗಳು ನೆಲೆಸಿದ್ದಾರೆ. ತಾವು ಕಾರ್ಯನಿರ್ವಹಿಸುತ್ತಿರುವ ಪ್ರದೇಶದಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಯಾವದೇ ಸಮಸ್ಯೆಗಳು ಎದುರಾದರೆ ಸಂಘಕ್ಕೆ ಮಾಹಿತಿ ನೀಡುವಂತೆ ಕುಶಾಲಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘÀದ ವೀರಾಜಪೇಟೆ ಅಧ್ಯಕ್ಷ ಶಿವಪ್ಪ, ಸೋಮವಾರಪೇಟೆ ತಾಲೂಕು ಸಂಘದ ಸದಸ್ಯ ಲೋಕೇಶ್ ಹಾಗೂ ಸಿದ್ದಾಪುರದ ವಿಶ್ವನಾಥ್ ಉಪಸ್ಥಿತರಿದ್ದರು.