ಮಡಿಕೇರಿ, ಫೆ. 17: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು, ತಾ. 28ರೊಳಗೆ ಪತ್ರಿಕಾಭವನಕ್ಕೆ ತಲಪಿಸಬೇಕಾಗಿದೆ. ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವದಿಲ್ಲ. ವರದಿಗಳು 2018ರ ಜನವರಿಯಿಂದ 2018 ಡಿಸೆಂಬರ್ 31 ರೊಳಗೆ ಪ್ರಕಟವಾಗಿರಬೇಕು. ಪ್ರಶಸ್ತಿಗೆ ವರದಿ ಹಾಕುವವರು ಮೂರು ಪ್ರತಿಗಳನ್ನು ಹಾಕಬೇಕು. ದೃಶ್ಯಮಾಧ್ಯಮದವರು ತಮ್ಮ ಚಾನಲ್‍ಗಳಲ್ಲಿ ಪ್ರಸಾರವಾದ ಸುದ್ದಿಗಳ ಸಿಡಿಯನ್ನು ನೀಡಬೇಕಾಗುತ್ತದೆ.

ಜಿಲ್ಲಾ ಸಂಘದಿಂದ ಅತ್ಯುತ್ತಮ ಗ್ರಾಮೀಣ ವರದಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು, ಆ ಪ್ರಶಸ್ತಿಯನ್ನು ಇನ್ನು ಮುಂದೆ ಕೊಡಗು ಪತ್ರಿಕೆಯ ಸಂಪಾದಕ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥವಾಗಿ ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ, ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ, ಸಂಘದ ಉಪಾಧ್ಯಕ್ಷ ಸಿ.ಎನ್. ಸುನಿಲ್‍ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವಿಡಿಯೋಗ್ರಾಫಿ ಪ್ರಶಸ್ತಿ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ, ಕೋವರ್‍ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿದ ಅರಣ್ಯ ವನ್ಯಜೀವಿ ಪ್ರಶಸ್ತಿ ವರದಿ. ಬೆಳೆಗಾರ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ-ತಾಯಿ ಅಜ್ಜಮಾಡ ಸುಬ್ಬಯ್ಯ ಹಾಗೂ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ವರದಿ ಪ್ರಶಸ್ತಿ. ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೇರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ.

ಕೈಬುಲಿರ ಪಾರ್ವತಿ ಬೋಪಯ್ಯ ತಮ್ಮ ತಂದೆ-ತಾಯಿ ಉತ್ತಯ್ಯ-ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿ. ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯರಾಗಿರುವ ಎಸ್.ಎ. ಮುರಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿ, ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರಿರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿ, ಶಕ್ತಿ ಸಲಹಾ ಸಂಪಾದಕರಾಗಿರುವ ಬಿ.ಜಿ. ಅನಂತಶಯನ ತಮ್ಮ ಹೋಂಸ್ಟೇ ಅಲ್ಪೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿ ಛಾಯಾಚಿತ್ರ ವರದಿ, ಸ್ವಸ್ಥ ಸಂಸ್ಥೆ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿ,

ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿ, ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತ ವರದಿ ಪ್ರಶಸ್ತಿ, ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ಮಂಡಿಬೆಲೆ ದ್ಯಾವಮ್ಮ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿ (ಸುದ್ದಿವಾಹಿನಿ).