ಸೋಮವಾರಪೇಟೆ, ಏ. 27: ಮಾದಾಪುರ ಸಮೀಪದ ಬಿಜಾಂಬಿ ಕಾಫಿ ಎಸ್ಟೇಟಿನಲ್ಲಿ ಆಕಸ್ಮಿಕ ಮರವೊಂದು ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಚೌಡ್ಲು ಗ್ರಾಮದ ಬೀರೇಬೆಟ್ಟ ನಿವಾಸಿ ಸೋಮಪ್ಪಶೆಟ್ಟಿಯವರ ಮಗ ಮೋಹನ್ (50) ಎಂಬವರೇ ದುರ್ಮರಣಕ್ಕೀಡಾದವರಾಗಿದ್ದು, ಇಂದು ಎಸ್ಟೇಟ್ ನಲ್ಲಿ ಸಿಲ್ವರ್ ಮರ ಅಳತೆ ಮಾಡುವ ಸಂದರ್ಭ ದುರ್ಘಟನೆ ಸಂಭವಿಸಿದೆ. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಾದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಸ್ಥಳಕ್ಕೆ ಠಾಣಾಧಿಕಾರಿ ಶಿವಶಂಕರ್, ಪೇದೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.