ಮಡಿಕೇರಿ, ಜು. 11: ಸಹಕಾರ ಸಂಘಗಳು ರೈತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರೂ ಕೂಡ ಸಹಕಾರ ಇಲಾಖೆಯು ಸಹಕಾರ ಸಂಘಗಳ ಮೇಲೆ ಕಾನೂನುಗಳನ್ನು ಹೇರುವ ಮೂಲಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಎನ್. ಗಂಗಣ್ಣ ವಿಷಾದಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ನಗರದ ಕೂರ್ಗ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 5400 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಎಲ್ಲಾ ಜಿಲ್ಲೆಗಳ ಸಹಕಾರ ಕೇಂದ್ರ ಬ್ಯಾಂಕ್‍ಗಳು ಕೃಷಿಪತ್ತಿನ ಸಹಕಾರ ಸಂಘಗಳಿಗೆ ಸಾಲ ನೀಡುವ ಮೂಲಕ ರೈತರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಸಂಘಗಳು ಜಿಲ್ಲಾ ಕೇಂದ್ರ ಬ್ಯಾಂಕುಗಳನ್ನು ಅವಲಂಬಿಸದೆ ಸ್ವಾವಲಂಬನೆಯಿಂದ ಕೆಲಸ ಮಾಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಅವರು ಆಶಿಸಿದರು.

ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಅವರು ಮಾತನಾಡಿ ಜಿಲ್ಲೆಯ ಸಹಕಾರ ಬ್ಯಾಂಕ್‍ಗಳು ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿವೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‍ನ ನಿರಾಶ್ರಿತರಿಗೆ ಪರಿಹಾರ ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದೆ ಎಂದರು.

ಬ್ಯಾಂಕ್‍ನ ಮಹಾಸಭೆಯನ್ನು ಸೆಪ್ಟೆಂಬರ್ ಒಳಗೆ ನಡೆಸಿ ಆಡಿಟ್ ಮುಗಿಸಿಕೊಳ್ಳಬೇಕು. ಮತ್ತು ಬ್ಯಾಂಕ್‍ನ ಅಧಿಕಾರಿಗಳು ದಕ್ಷತೆಯಿಂದ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಜಿಲ್ಲೆಯ ಸಹಕಾರಿ ಬ್ಯಾಂಕ್‍ಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ ಸಹಕಾರಿ ಬ್ಯಾಂಕ್‍ಗಳು ಜಿಲ್ಲೆಯಾದ್ಯಂತ ಹಲವಾರು ಉತ್ತಮ ಕೆಲಸಗಳನ್ನು ನಡೆಸುತ್ತಿವೆ. ಜಿಲ್ಲೆಯ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿವೆ. ಜಿಲ್ಲೆಯ ವಿವಿಧ ಬ್ಯಾಂಕ್‍ಗಳೊಂದಿಗೆ ಉತ್ತಮ ಭಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಶಶಿಧರ ಎಲೆ ಅವರು ‘ಸಹಕಾರಿ ಸಂಘಗಳಲ್ಲಿ ಪರಿಣಾಮಕಾರಿ ಆಡಳಿತ ಮತ್ತು ನಿರ್ವಹಣೆ’ಯ ಕುರಿತು ಉಪನ್ಯಾಸ ನೀಡಿದರು.

ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷರಾದ ಎನ್.ಗಂಗಣ್ಣ ಮತ್ತು ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾದ ಬಾಂಡ್ ಗಣಪತಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ.ಅಚ್ಚಯ್ಯ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್.ಪಿ. ನಿಂಗಪ್ಪ, ಪ್ರೇಮ ಸೋಮಯ್ಯ, ಬಿ.ಎ.ರಮೇಶ್ ಚಂಗಪ್ಪ, ಎಚ್.ಎನ್.ರಾಮಚಂದ್ರ, ಕೆ.ಎಸ್.ಗಣಪತಿ, ಪಿ.ಜಿ.ನಂಜುಂಡ, ಎನ್.ಎ. ರವಿ ಬಸಪ್ಪ, ಕೆ.ಎಂ. ತಮ್ಮಯ್ಯ, ಕನ್ನಂಡ ಸಂಪತ್, ಪಿ.ಮನು ರಾಮಚಂದ್ರ, ಸಿ.ಕೃಷ್ಣ ಗಣಪತಿ, ಬಿ.ವಿ.ಟಿ. ಮಣಿಪಾಲದ ಯೋಜನಾಧಿಕಾರಿ ಪಿ.ಅರುಣ್. ಇತರರು ಇದ್ದರು.

ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ಅವರು ನಿರೂಪಿಸಿದರು, ಆರ್.ಮಂಜುಳಾ ಪ್ರಾರ್ಥಿಸಿದರು, ಕೊಡಪಾಲ ಗಣಪತಿ ಸ್ವಾಗತಿಸಿದರು, ರವಿ ಬಸಪ್ಪ ವಂದಿಸಿದರು.