ಮಡಿಕೇರಿ, ಸೆ. 18: ಸದಾ ಗೊಂದಲಗಳಲ್ಲಿಯೇ ಗುರುತಿಸಿಕೊಳ್ಳುತ್ತಿರುವ ಜಾತ್ಯತೀತ ಜನತಾದಳ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಅಧಿಕಾರ - ಅಧ್ಯಕ್ಷಗಾದಿಯ ವಿಚಾರವಾಗಿ ಪಕ್ಷದ ನಾಯಕರುಗಳ ನಡುವೆ ಮತ್ತೆ ‘ವಾಕ್ ಸಮರ’ ಆರಂಭಗೊಂಡಿದೆ. ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಮೊನ್ನೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಜಿಲ್ಲೆಯ ಜೆಡಿಎಸ್ ಮುಖಂಡ, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿ; ಜಿಲ್ಲಾಧ್ಯಕ್ಷ ಗಣೇಶ್ ಅವರ ವಿರುದ್ಧ ವೇದಿಕೆಯಲ್ಲಿಯೇ ದೂರಿದ್ದರು. ಗಣೇಶ್ ಅವರೂ ಕೂಡ ಜೀವಿಜಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ಉಭಯ ನಾಯಕರುಗಳು ಪರಸ್ಪರ ಆರೋಪಗಳನ್ನು ಹೊರಿಸಿದ್ದಾರೆ.