ಶ್ರೀಮಂಗಲ, ಸೆ. 18: ಕುಟ್ಟದಿಂದ ಕಾನೂರುವರೆಗೆ ಮುಖ್ಯರಸ್ತೆ ಗುಂಡಿಬಿದ್ದು, ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತುಂಬ ಸಂಕಷ್ಟ ಎದುರಾಗಿದೆ ಎಂದು ಕುಟ್ಟ ಚೂರಿಕಾಡು ಕೊಡವ ವೆಲ್‍ಫೇರ್ ಅಸೋಸಿಯೇಶನ್‍ನ ಅಧ್ಯಕ್ಷ ಬೊಳ್ಳೇರ ರಾಜ ಸುಬ್ಬಯ್ಯ ಮತ್ತು ಪದಾಧಿಕಾರಿಗಳಾದ ಕಳ್ಳಿಚಂಡ ರತ್ನ, ಅಳಮೇಂಗಡ ಮೋಟಯ್ಯ ಅಸಮಧಾನ ವ್ಯಕ್ತಪಡಿಸಿದ್ದು, ಕೂಡಲೇ ಈ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕುಟ್ಟ-ಕಾನೂರು ನಡುವೆ 10 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು 1 ಕಿ.ಮೀ. ವ್ಯಾಪ್ತಿಯಲ್ಲಿ 8-10 ಗುಂಡಿಗಳು ಎದುರಾಗುತ್ತಿವೆ. ಮಳೆ ಬಿದ್ದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿ ಎಲ್ಲಿದೆ ಹಾಗೂ ಗುಂಡಿಯ ಆಳ ಗೋಚರವಾಗದೆ ವಾಹನಗಳಿಗೆ ಹಾನಿ ಆಗುತ್ತಿವೆ. ದಿನೇ ದಿನೇ ಗುಂಡಿಗಳು ಹೊಂಡಗಳಾಗಿ ಮಾರ್ಪಾಡುತ್ತಿದ್ದು, ಬಸ್ ಸೇರಿದಂತೆ ಲಘು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಆದ್ದರಿಂದ ಆದಷ್ಟು ಬೇಗ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಲೋಕೋಪಯೋಗಿ ಇಲಾಖೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನೂ ಒಂದು ವಾರದೊಳಗೆ ಗುಂಡಿ ಮುಚ್ಚುವ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಅವರು ಎಚ್ಚರಿಸಿದ್ದಾರೆ.