ಸಿದ್ದಾಪುರ, ಸೆ. 19 : ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂಧಲೆ ನಡೆಸಿದ ಪರಿಣಾಮ ಕಾಫಿಗಿಡಗಳು ಸೇರಿದಂತೆ ಹಣ್ಣಿನ ಮರಗಳನ್ನು ಧ್ವಂಸಗೊಳಿಸಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ಚಿಕ್ಕನಳ್ಳಿ ಸಮೀಪ ಜೋಜ್ ತೋಮಸ್ ಎಂಬವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಕಾಫಿ ತೋಟದಲ್ಲಿ ದಾಂಧಲೆ ನಡೆಸಿವೆ. ಫಸಲು ಇರುವ ಕಾಫಿ ಗಿಡಗಳನ್ನು ತುಳಿದು ನಾಶಗೊಳಿಸಿವೆ. ಬಟರ್ ಫ್ರೂಟ್ ಮರಗಳನ್ನು ನಾಶಪಡಿಸುತ್ತಿವೆ. ತೋಟದಲ್ಲಿ ಅಳವಡಿಸಿದ ಬೇಲಿಯನ್ನು ತುಳಿದು ಹಾನಿಗೊಳಿಸಿವೆ. ಅಲ್ಲದೇ, ಇತ್ತೀಚೆಗೆ ಈ ಭಾಗದಲ್ಲಿ ಕಾಡುಕೋಣಗಳು ಕೂಡಾ ಬೀಡುಬಿಟ್ಟಿದ್ದು, ದಾಂಧಲೆ ನಡೆಸುತ್ತಿದ್ದವು. ಕಾಡಾನೆಗಳ ಉಪಟಳದಿಂದಾಗಿ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಜೋಜ್ ತೋಮಸ್ ಅವರ ಹಾನಿಗೊಳಗಾದ ಕಾಫಿ ತೋಟಕ್ಕೆ ವೀರಾಜಪೇಟೆ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.