ಕುಶಾಲನಗರ, ಸೆ. 20: ಕುಶಾಲನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಆಸ್ಪತ್ರೆಯ ಗಾಜು ಹಾನಿ ಮಾಡಿದ ಘಟನೆ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಮೊಕದ್ದಮೆ ದಾಖಲಾಗಿದ್ದು, ಓರ್ವ ವ್ಯಕ್ತಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಆಟೋ ಚಾಲಕ ಯೋಗೀಶ, ಮಹೇಶ್ ಎಂಬವರುಗಳು ಗುರುವಾರ ರಾತ್ರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದು, ವೈದ್ಯರೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆಸುವದರೊಂದಿಗೆ ಸರಕಾರಿ ಆಸ್ಪತ್ರೆಯ ಮುಖ್ಯದ್ವಾರದ ಗಾಜನ್ನು ಒಡೆದು ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಆಸ್ಪತ್ರೆಯ ವೈದ್ಯರು ಕುಶಾಲನಗರ ಪಟ್ಟಣ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಸಂಬಂಧ ಯೋಗೇಶ್ ಎಂಬಾತನನ್ನು ಬಂಧಿಸಿದ್ದಾರೆ. ಮಹೇಶ್ ಎಂಬಾತ ತಲೆಮರೆಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿ ಸದಾಶಿವ ಅವರು ತಿಳಿಸಿದ್ದಾರೆ.