ಸುಂಟಿಕೊಪ್ಪ, ಸೆ. 20: ಫುಟ್‍ಬಾಲ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಪಿ.ಕೆ. ಜಗದೀಶ್ ರೈ ಅವರನ್ನು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸ ಲಾಯಿತು. ಸುಂಟಿಕೊಪ್ಪ ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ವಹಿಸಿ ಮಾತನಾಡಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ಫುಟ್ಬಾಲ್ ಕ್ರೀಡೆಯು ಬೆಳೆಸಲು ತನ್ನದೆ ಯಾದ ಕೊಡುಗೆಯಿಂದ ನೇತಾಜಿ ಯುವಕ ಸಂಘದ ಸದಸ್ಯರಾಗಿ ಫುಟ್ಬಾಲ್ ಕ್ರೀಡಾಪಟುವಾಗಿದ್ದ ಪಿ.ಕೆ. ಜಗದೀಶ್‍ರೈ ಅವರು ಕೊಡಗಿನ ಫುಟ್ಬಾಲ್ ಪ್ರತಿಭೆಗಳನ್ನು ಬೆಳೆಸುವ ದಿಸೆಯಲ್ಲಿ ನಿರಂತರವಾಗಿ ಹೋರಾಟ ನಡೆಸಿ ಕೊಡಗಿನಲ್ಲಿ ಫುಟ್ಬಾಲ್ ಸಂಸ್ಥೆಯನ್ನು ಸ್ಥಾಪಿಸಿ ಪ್ರತಿಭೆಗಳ ಬೆಳವಣಿಗೆಗೆ ಸಾಕ್ಷಿಯಾಗಿದ್ದರು. ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಇವರು ಎಲೆಯ ಮರೆ ಕಾಯಿ ಇದ್ದಂತೆ ಜೀವನದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದರು. ಅದರ ಫಲವೇ ರಾಜ್ಯದ ಉಪಾಧ್ಯಕ್ಷ ಈ ಬಾರಿ ಆಯ್ಕೆಗೊಂಡಿರುವದು ಉತ್ತಮ ಕಾರ್ಯನಿರ್ವಹಿಸಿದ ಪ್ರತಿಭೆಗೆ ಸಂದ ಗೌರವವೆಂದು ಮಂಜುನಾಥ್ ಬಣ್ಣಿಸಿದರು.

ವೇದಿಕೆಯಲ್ಲಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ. ಶಂಕರ್, ಉಪಾಧ್ಯಕ್ಷೆ ಮೀನಾ ಸೋಮಯ್ಯ, ಪಂಚಾಯಿತಿ ಸದಸ್ಯ ಎಂ.ಎಂ. ಉಸ್ಮಾನ್, ಆಡಳಿತ ಮಂಡಳಿ ಸದಸ್ಯರಾದ ಕುಟ್ಟಪ್ಪ, ಕುಟ್ಟಯ್ಯ, ಸನ್ನಿ ಕಾರ್ಯಪ್ಪ, ಎ.ಬಿ. ಸುಭಾಷ್, ಪತ್ರಕರ್ತರಾದ ಬಿ.ಸಿ. ದಿನೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ, ಶಿಕ್ಷಕರು ಇದ್ದರು.

ಚೈತ್ರಾ ತಂಡ ಪ್ರಾರ್ಥಿಸಿ, ಇಂದಿರಾ ಶಿಕ್ಷಕಿ ಸ್ವಾಗತಿಸಿ, ಗುರ್ಕಿ ನಿರೂಪಿಸಿ, ಶೋಭಾ ವಂದಿಸಿದರು.