ಗೋಣಿಕೊಪ್ಪ ವರದಿ, ಜೂ. ೧೭: ಸಮುದಾಯ ಆರೋಗ್ಯ ಕೇಂದ್ರದ ಉದ್ಯಾನವನವನ್ನು ಸ್ಥಳೀಯ ಯುವಕರು ಸ್ವಚ್ಛಗೊಳಿಸಿದರು.

ಸುಮಾರು ೧೫ಕ್ಕೂ ಹೆಚ್ಚು ಯುವಕರ ತಂಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉದ್ಯಾನವನದಲ್ಲಿದ್ದ ಕಾಡು ಕಡಿದು ಶ್ರಮದಾನ ಮಾಡಿದರು. ಅಲ್ಲಿನ ಕಸವನ್ನು ವಾಹನದ ಮೂಲಕ ತೆರವುಗೊಳಿಸಿದರು.

ಆರೋಗ್ಯ ಕೇಂದ್ರಕ್ಕೆ ಬರುವ ಹೊರರೋಗಿಗಳು, ಕೊರೊನಾ ಪರೀಕ್ಷೆಗೆ ಬರುವವರು ಉದ್ಯಾನವನದಲ್ಲಿ ಕುಳಿತು ಅಂತರ ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ಲಾಕ್‌ಡೌನ್ ನಡುವೆ ಮನೆಯಲ್ಲಿರುವ ಯುವಕರು ಸಾರ್ವಜನಿಕವಾಗಿ ಸೇವೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.