ಸೋಮವಾರಪೇಟೆ, ಜೂ. ೧೯: ತೋಟದ ಶೆಡ್‌ನಿಂದ ಜಾನುವಾರನ್ನು ಕಳವು ಮಾಡಿರುವ ಘಟನೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕಲ್ಕಂದೂರು ಗ್ರಾಮ ನಿವಾಸಿ, ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಯೋಗೇಂದ್ರ ಅವರ ತೋಟದ ಶೆಡ್‌ನಲ್ಲಿ ಜಾನುವಾರನ್ನು ಕಟ್ಟಿಹಾಕಲಾಗಿತ್ತು. ನಿನ್ನೆ ರಾತ್ರಿ ಶೆಡ್‌ಗೆ ಆಗಮಿಸಿರುವ ದನಕಳ್ಳರು ಜಾನುವಾರನ್ನು ಕಳವು ಮಾಡಿದ್ದಾರೆ.

ಶೆಡ್‌ನ ಬೀಗ ಒಡೆದು ಒಳನುಗ್ಗಿ ಜಾನುವಾರನ್ನು ಕಳವು ಮಾಡಲಾಗಿದೆ. ನಿನ್ನೆ ರಾತ್ರಿ ೧೦.೩೦ರ ಸುಮಾರಿಗೆ ಟಾಟಾ ಏಸ್ ವಾಹನವೊಂದು ಕಲ್ಕಂದೂರು ಗ್ರಾಮದ ಯೋಗೇಂದ್ರ ಅವರ ತೋಟದ ಬಳಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದುದನ್ನು ಗ್ರಾಮದ ಯುವಕನೋರ್ವ ನೋಡಿದ್ದಾನೆ. ಬಳಿಗೆ ತೆರಳಿ ನೋಡಿದಾಗ ವಾಹನದೊಳಗೆ ಯಾರೂ ಇರಲಿಲ್ಲ. ಇದೇ ವಾಹನದಲ್ಲಿ ಜಾನುವಾರನ್ನು ಸಾಗಿಸಿರುವ ಅನುಮಾನ ಮೂಡಿದೆ.

ಈ ಬಗ್ಗೆ ಮಾಲೀಕ ಯೋಗೇಂದ್ರ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.