ಮಡಿಕೇರಿ, ಸೆ.೨೧ : ಮಡಿಕೇರಿಯಲ್ಲಿ ಶಾಖೆ ಹೊಂದಿರುವ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೧-೨೨ ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ವಹಿಸಿ ಸಂಘದ ಖರ್ಚು ವೆಚ್ಚದ ಮಾಹಿತಿಯನ್ನು ತಿಳಿಸಿದರು. ಈ ಬಾರಿ ಸಂಘವು ೧೪,೮೭೫ ಸದಸ್ಯರಿಂದ ೩.೬೩ಕೋಟಿ ಪಾಲು ಬಂಡವಾಳ ಹಾಗೂ ೧೨೭.೩೪ ಕೋಟಿ ಠೇವಣಿ ಸಂಗ್ರಹಿಸಿದೆ ಸದಸ್ಯರುಗಳಿಗೆ ರೂ.೧೦೭.೨೬ ಕೋಟಿ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ ೧೬.೭೪ ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲಾಗಿದೆ.

ಪ್ರಸಕ್ತ ವರ್ಷ ಒಟ್ಟು ೬೫೬.೭೪ ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ. ೧.೨೦ ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.೧೫ ರಷ್ಟು ಡಿವಿಡೆಂಡ್ ವಿತರಿಸಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ೧೭ ಶಾಖೆಗಳನ್ನು ಹೊಂದಿರುವ ಸಂಘವು ಬೆಳ್ಳಿ ವರ್ಷದಲ್ಲಿದ್ದು ಸಂಘದ ಬೆಳ್ಳಿ ಹಬ್ಬದ ವೇಳೆ ಸದಸ್ಯರಿಗೆ ೨೫% ಡಿವಿಡೆಂಡ್ ಹಾಗೂ ೨೫ ಶಾಖೆಯನ್ನು ಹೊಂದುವ ಗುರಿ ಹೊಂದಲಾಗಿದೆ. ಈ ಬಾರಿ ಕೊಡಗು ಜಿಲ್ಲೆಯ ನಾಪೋಕ್ಲು, ಸೋಮವಾರಪೇಟೆಯಲ್ಲಿ ಹೊಸ ಶಾಖೆ ಆರಂಭಿಸಲಿದ್ದೇವೆ ಎಂದು ತಿಳಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಸಾಧನೆಗೈದ ೫೩ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

ಈ ಸಂದರ್ಭ ಉಪಾಧ್ಯಕ್ಷರಾದ ಮೋಹನ್‌ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ನಾರ್ಕೋಡು, ದಿನೇಶ್ ಮಡಪ್ಪಾಡಿ, ಜಯಲಲಿತಾ ಕೆ.ಎಸ್, ನಳಿನಿ ಸೂರಯ್ಯ, ಲತಾ ಎಸ್. ಮಾವಾಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜಾಕೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.