ಸೋಮವಾರಪೇಟೆ, ನ. ೨೦: ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ಗ್ರಾಮಸ್ಥರು, ಭಕ್ತಾದಿಗಳು, ಸರ್ಕಾರ ಹಾಗೂ ದಾನಿಗಳ ನೆರವಿನೊಂದಿಗೆ ರೂ. ೬೦ ಲಕ್ಷ ವೆಚ್ಚದಲ್ಲಿ ಶ್ರೀಕುಮಾರಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ನೂತನ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಮಂಥರ್ ಗೌಡ ಅವರು, ಶಾಂತಳ್ಳಿಯAತಹ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಸಮುದಾಯ ಭವನದ ಅವಶ್ಯಕತೆಯಿದ್ದು, ಇದನ್ನು ಮನಗಂಡು ಸಮಿತಿಯವರು ನೂತನ ಭವನ ನಿರ್ಮಾಣಕ್ಕೆ ಮುಂದಾಗಿರು ವುದು ಶ್ಲಾಘನೀಯ. ಸಮುದಾಯ ಭವನಕ್ಕೆ ಮುಂದಿನ ದಿನಗಳಲ್ಲಿ ಶಾಸಕರ ನಿಧಿಯಿಂದ ರೂ. ೧೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಸಮು ದಾಯ ಭವನಗಳ ನಿರ್ಮಾಣದಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಕುಮಾರಲಿಂಗೇಶ್ವರ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ ಹಾಗೂ ದಾನಿಗಳಾದ ಅರುಣ್ ಕೊತ್ನಳ್ಳಿ ಮಾತನಾಡಿ, ನೂತನ ಭವನ ನಿರ್ಮಾಣಕ್ಕೆ ವೈಯಕ್ತಿಕ ವಾಗಿ ರೂ. ೨ ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು ಎಂದರು.

ಈ ಸಂದರ್ಭ ಶ್ರೀ ಕುಮಾರ ಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯ ದರ್ಶಿ ಮುತ್ತಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದೇವಾಲಯ ಸಮಿತಿ ಮಾಜೀ ಅಧ್ಯಕ್ಷ ಕೆ.ಕೆ. ಸುಬ್ಬಯ್ಯ, ಪ್ರಮುಖರಾದ ರಾಮಚಂದ್ರ, ಕೆ.ಎಂ. ಕೃಷ್ಣಕುಮಾರ್, ಗ್ರಾಮಾಧ್ಯಕ್ಷ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷೆ ಸವಿತ, ಸದಸ್ಯ ಚಂಗಪ್ಪ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ವೀರೇಂದ್ರ, ಗುತ್ತಿಗೆದಾರ ಶ್ರೀನಿವಾಸ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.