ಗೋಣಿಕೊಪ್ಪಲು, ನ. ೨೦: ಕಳೆದ ಹಲವಾರು ವರ್ಷಗಳಿಂದ ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ಹರಿಹರ ನಾಲ್ಕೇರಿ ಸಂಪರ್ಕ ರಸ್ತೆಗೆ ರೂ. ೨ ಕೋಟಿ ಅನುದಾನ ಮಂಜೂರಾಗಿದ್ದು, ಈ ರಸ್ತೆ ಕಾಮಗಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ನಾಗರಿಕರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಇಲ್ಲಿನ ನಾಗರಿಕರ ಬಹು ನಿರೀಕ್ಷೆಯ ರಸ್ತೆ ಅಭಿವೃದ್ಧಿಗೆ ಸರ್ಕಾರ ರೂ. ೨ ಕೋಟಿ ಅನುದಾನ ಮಂಜೂರು ಮಾಡಿದೆ. ಇದರಿಂದ ಹರಿಹರ, ನಾಲ್ಕೇರಿ ಸಂಪರ್ಕ ರಸ್ತೆಗೆ ಅನುಕೂಲವಾಗಲಿದೆ. ರಸ್ತೆ ಕಾಮಗಾರಿ ಸಂದರ್ಭ ಸ್ಥಳೀಯ ಗ್ರಾಮಸ್ಥರು ಗುಣಮಟ್ಟವನ್ನು ಪರಿಶೀಲಿಸಬೇಕು. ಅಲ್ಲದೆ ರಸ್ತೆಯ ೨ ಬದಿಯಲ್ಲಿಯೂ ಅಗಲೀಕರಣ ಸಂದರ್ಭ ತೋಟದ ಮಾಲೀಕರು ರಸ್ತೆ ಬದಿಯ ಜಾಗವನ್ನು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಇದರಿಂದ ಕೆಲಸ ನಿರ್ವಹಿಸುವ ಗುತ್ತಿಗೆದಾರರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಸರ್ವ ಗ್ರಾಮಸ್ಥರ ಸಹಕಾರ ಅತ್ಯಮೂಲ್ಯವಾಗಿದೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಈ ಹಿಂದೆ ಲೋಕೋಪಯೋಗಿ ಸಚಿವರಾದ ಮಹದೇವಪ್ಪ ಈ ಪ್ರಮುಖ ಸಂಪರ್ಕ ರಸ್ತೆಗೆ ಅನುದಾನ ಬಿಡುಗಡೆಗೊಳಿ ಸಿದ್ದರು. ಆದರೆ ಕಾಮಗಾರಿ ಆರಂಭವಾಗಿರಲಿಲ್ಲ. ಹಲವು ಮನವಿ ಸಲ್ಲಿಸಿದ್ದರೂ ರಸ್ತೆ ಅಭಿವೃದ್ಧಿಗೆ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ಇದೀಗ ಶಾಸಕ ಪೊನ್ನಣ್ಣ ಅವರ ವಿಶೇಷ ಕಾಳಜಿಯಿಂದ ಅನುದಾನ ಮಂಜೂರಾಗಿದೆ.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಡಿಸಿಸಿ ಸದಸ್ಯರಾದ ಮುಕ್ಕಾಟೀರ ಸಂದೀಪ್, ಕಾಳಿಮಾಡ ಪ್ರಶಾಂತ್, ಮಾಜಿ ತಾ.ಪಂ. ಮಾಜಿ ಸದಸ್ಯ ಪಲ್ವೀನ್ ಪೂಣಚ್ಚ, ಜಿ.ಪಂ. ಮಾಜಿ ಸದಸ್ಯ ಬಿ.ಎನ್.ಪೃಥ್ಯು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪೆಮ್ಮಂಡ ಪೊನ್ನಪ್ಪ, ಅಪ್ಪಚಂಗಡ ಮೋಟಯ್ಯ, ಸೇರಿದಂತೆ ಪ್ರಮುಖರಾದ ಪೆಮ್ಮಣಮಾಡ ಸತೀಪ, ದರ್ಶನ್, ನಿವೃತ್ತ ಪ್ರಾಂಶುಪಾಲ ಬಾಚಿರ ಕಾರ್ಯಪ್ಪ, ಕಟ್ಟೆರ ಬಾಬು, ಕಟ್ಟೆರ ಕುಶಾಲಪ್ಪ, ಮುಕ್ಕಾಟೀರ ವಿನು, ಪೊನ್ನಪ್ಪ, ಮತ್ರಂಡ ದಿಲ್ಲು, ತೀತಿರ ಜೀವನ್, ಚೊಟ್ಟೆಯಂಡಮಾಡ ಉದಯ, ಕಟ್ಟಿ ಕಾರ್ಯಪ್ಪ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಚಂಗುಲAಡ ಸೂರಜ್, ತೀತಿರ ಅನಿತಾ, ಮನ್ನೇರ ರಮೇಶ್, ಅಲ್ಲುಮಾಡ ಮುತ್ತಪ್ಪ, ನೂರೆರ ಮನೋಹರ್, ಪರಮಾಲೆ ಗಣೇಶ್, ಪೆಮ್ಮಂಡ ರಾಜ, ಶಾಜಿ ಅಚ್ಚುತ್ತನ್, ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಹಾಜರಿದ್ದರು.