ವೀರಾಜಪೇಟೆ, ನ. ೨೧: ವೀರಾಜಪೇಟೆ ವಲಯದ ಹೆಗ್ಗಳ ಶಾಖೆ ಹಾಗೂ ಚೆಯ್ಯಂಡಾಣೆ ಶಾಖೆಗೆ ಒಳಪಡುವ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತಾ. ೨೨ರಂದು (ಇಂದು) ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯಲಿದೆ.

ಗ್ರಾಮದ ಗದ್ದೆ ಹಾಗೂ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಷ್ಟಪಡಿಸುತ್ತಿರುವುದರಿಂದ ಹಾಗೂ ಹೆಚ್ಚು ಉಪಟಳ ನೀಡುತ್ತಿರುವುದರಿಂದ ಗ್ರಾಮಸ್ಥರ ಮನವಿಯ ಮೇರೆಗೆ ಹೆಗ್ಗಳ, ಪಾಲಂಗಾಲ, ಕೆದಮುಳ್ಳೂರು, ಕರಡ ಮುಂತಾದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಓಡಿಸಲಾಗುವುದು. ಕಾರ್ಯಾಚರಣೆ ನಡೆಯುವ ಸಂದರ್ಭ, ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಹಾಗೂ ಆ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವೀರಾಜಪೇಟೆ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಪ್ರಕಟಣೆಯಲ್ಲಿ ಕೋರಿದ್ದಾರೆ.