ಕೊಡ್ಲಿಪೇಟೆ, ಫೆ. ೧೨: ಒಕ್ಕಲಿಗ ಯುವ ವೇದಿಕೆ ಆಶ್ರಯದಲ್ಲಿ ಸ್ಥಳಿಯ ಸರಕಾರಿ ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ನಾಡಪ್ರಭು ಕೆಂಪೇಗೌಡ ಪ್ರೀಮಿಯರ್ ಲೀಗ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯುವರತ್ನ ತಂಡ ಜಯಗಳಿಸಿ ಪ್ರಶಸ್ತಿಗೆ ಭಾಜನವಾಯಿತು. ಫೈನಲ್‌ನಲ್ಲಿ ಸೋಲನುಭವಿಸಿದ ಸ್ಟಾರ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಆಯೋಜಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ವಿಜೇತ ತಂಡಗಳು ಬಹುಮಾನವಾಗಿ ಪಡೆದುಕೊಳ್ಳುವ ಹಣವನ್ನು ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪ್ರೊತ್ಸಾಹಿಸಲು ವಿನಿಯೋಗಿಸಬೇಕೆಂದು ಕರೆನೀಡಿದರು. ಒಕ್ಕಲಿಗ ಯುವ ವೇದಿಕೆಯು ಕ್ರೀಡಾಕೂಟಗಳ ಜೊತೆಗೆ ಸಮಾಜಮುಖಿಯಾದ ಚಟುವಟಿಕೆಗಳನ್ನೂ ಸಹ ಆಯೋಜಿಸಬೇಕೆಂದು ಸಲಹೆ ನೀಡಿದರು.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಪ್ರಾಯೋಜಕತ್ವ ಹೊಂದಿದ್ದ ೧೨ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ಯುವರತ್ನ ತಂಡ ಎಬಿಡಿಕೆ ತಂಡವನ್ನು ಪರಾಜಯಗೊಳಿಸಿ ಹಾಗೂ ಎರಡನೇ ಸೆಮಿಫೈನಲ್ಸ್ನಲ್ಲಿ ಸ್ಟಾರ್ ವಾರಿಯರ್ಸ್ ತಂಡ ಟು ಇಲೆವನ್ ಬ್ರದರ್ಸ್ ತಂಡದ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿತು.

ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಟಾರ್ ವಾರಿಯರ್ಸ್ ತಂಡ ೪ ಓವರ್‌ಗಳಲ್ಲಿ ೨೫ ರನ್ ದಾಖಲಿಸಿದರೆ, ಯುವರತ್ನ ೩ ಓವರ್ ನಲ್ಲಿ ೨೬ರನ್ ದಾಖಲಿಸುವ ಮೂಲಕ ಜಯಗಳಿಸಿತು.

ವಿಜೇತರಿಗೆ ೬೦ ಸಾವಿರ ನಗದು, ದ್ವಿತಿಯ ಸ್ಥಾನ ಪಡೆದ ತಂಡಕ್ಕೆ ರೂ. ೩೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಗಳನ್ನು ಹಾಗೂ ಸೆಮಿಫೈನಲ್ಸ್ ಪರಾಜಿತ ತಂಡಕ್ಕೆ ತಲಾ ರೂ. ೧೦ ಸಾವಿರ ನಗದು, ಐದು ಉತ್ತಮ ಆಟಗಾರರಿಗೆ ಟ್ರೋಫಿಗಳನ್ನು ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ನಾಗೇಶ್ ಕೆಲಕೊಡ್ಲಿ ವಹಿಸಿದ್ದರು.

ವೇದಿಕೆಯಲ್ಲಿ ನಿವೃತ್ತ ತಹಶಿಲ್ದಾರ್ ಜಯರಾಂ, ತಾಲೂಕು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಉದ್ಯಮಿಗಳಾದ ರಮೇಶ್ ರಾಮೇಗೌಡ, ಕಿರಣ್ ಸದಾನಂದಗೌಡ, ಕೆ.ಟಿ. ಸಂತೋಷ್, ಕೊತ್ನಳ್ಳಿ ಅರುಣ್, ಜೆ.ಕೆ. ತೇಜ್‌ಕುಮಾರ್, ಧನು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ದನ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್, ಗ್ರಾ.ಪಂ. ಸದಸ್ಯ ಪ್ರಸನ್ನ, ಔರಂಗಜೇಬ್, ಅಭಿ ಮನುಗನಹಳ್ಳಿ, ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.