ಸಿದ್ದಾಪುರ, ಫೆ. ೧೪: ಕಾಫಿ ತೋಟದಲ್ಲಿ ಕಾಳು ಮೆಣಸು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ತೋಟದ ವ್ಯವಸ್ಥಾಪಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದ ಮೇರಿ ಲ್ಯಾಂಡ್ ತೋಟದಲ್ಲಿ ನಡೆದಿದೆ.

ಸ್ಥಳೀಯ ಕಾರ್ಮಿಕ ಮಣಿ ಎಂಬಾತ ಸೆರೆಯಾದ ವ್ಯಕ್ತಿ. ಕಳೆದ ಎರಡು ದಿನಗಳಿಂದ ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಕಾಳು ಮೆಣಸು ಕಳವಾಗಿರುವುದು ವ್ಯವಸ್ಥಾಪಕರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳ್ಳನನ್ನು ಸೆರೆಹಿಡಿಯುವ ಸಲುವಾಗಿ ತೋಟದಲ್ಲಿ ಕಾರ್ಮಿಕರು ಕಾವಲಿದ್ದರು. ಬುಧವಾರದಂದು ಸಂಜೆ ಸ್ಥಳೀಯ ಕಾರ್ಮಿಕ ಮಣಿ ಎಂಬಾತ ಕಾವಲುಗಾರರ ಕಣ್ತಪ್ಪಿಸಿ ಕಾಳುಮೆಣಸು ಕದಿಯುತ್ತಿದ್ದ ಸಂದರ್ಭದಲ್ಲಿ ವ್ಯವಸ್ಥಾಪಕರ ಕೈಗೆ ಸಿಕ್ಕಿದ್ದಾನೆ. ಕೂಡಲೇ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.