ಸಾಂಸ್ಕೃತಿಕ ಸ್ಪರ್ಧೆ- ಪ್ರದರ್ಶನ

ಶ್ರೀಮಂಗಲ, ಫೆ. ೧೪: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ರೋಟರಿ ಸಂಸ್ಥೆ ವೀರಾಜಪೇಟೆಯ ಜಂಟಿ ಆಶ್ರಯದಲ್ಲಿ ೧೭ರಂದು ಪೂರ್ವಾಹ್ನ ೧೦ ಗಂಟೆಗೆ ವೀರಾಜಪೇಟೆಯಲ್ಲಿರುವ ರೋಟರಿ ವಿದ್ಯಾಸಂಸ್ಥೆಯಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯಲ್ಲಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಅವರು ಬರೆದ ೧೮೮ನೆ ಹೆಜ್ಜೆಯ ಹಾಗೂ ನೂರೇರ ಸರಿತ ಉತ್ತಯ್ಯ ಬರೆದ ೧೮೯ನೇ ಹೆಜ್ಜೆಯ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು.

ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ಬನ್ಸಿ ಪೂವಣ್ಣ, ಕಾರ್ಯದರ್ಶಿ ಬಲ್ಯಮಂಡ ಮಧು ಮಾದಪ್ಪ, ಖಜಾಂಚಿ ಅಮ್ಮಣಕುಟ್ಟಂಡ ಸರೋಜ ಕಾರ್ಯಪ್ಪ, ರೋಟರಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಹೆಚ್.ಜೆ. ವಿಶಾಲಾಕ್ಷಿ, ದಾನಿಗಳಾದ ಬಾದುಮಂಡ ಚಿಮ್ಮ ಉತ್ತಯ್ಯ, ಬೊಪ್ಪಂಡ ತಾರ ಕರ್‌ಂಬಯ್ಯ ಲೇಖಕಿಯರಾದ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಹಾಗೂ ನೂರೇರ ಸರಿತ ಉತ್ತಯ್ಯ ಭಾಗವಹಿಸಲಿದ್ದಾರೆ.

ಈ ಸಂದರ್ಭ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಶಬ್ದ ಹೇಳುವ ಸ್ಪರ್ಧೆ- ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಭಾಷೆಯಲ್ಲಿ ಆಶುಭಾಷಣ ಸ್ಪರ್ಧೆ- ಕಾಲೇಜು- ಸಾರ್ವಜನಿಕ ವಿಭಾಗದಲ್ಲಿ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು ಹಾಗೂ ಕೊಡವ ಭಾಷೆಯ ಹಾಸ್ಯ ಸ್ಪರ್ಧೆ ನಡೆಸಲಾಗುವುದು. ವಿಜೇತರಿಗೆ ವಿಭಾಗವಾರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನ ನಡೆಯಲಿದೆ.

ಜಾತಿ ಧರ್ಮದ ನಿರ್ಬಂಧವಿಲ್ಲದೆ ಕೊಡವ ಸಾಹಿತ್ಯ ಸಂಸ್ಕೃತಿಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಕೂಟದ ಪ್ರಕಟಣೆಯಲ್ಲಿ ತಿಳಿಸಿದೆ.