ಸೋಮವಾರಪೇಟೆ, ಫೆ. ೧೫: ತಾಲೂಕಿನ ಶನಿವಾರಸಂತೆ ಸಮೀಪದ ಹುಲುಸೆ ಗ್ರಾಮದ ಯುವಕನೋರ್ವ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾ.೧೩ ರಂದು ನಡೆದಿದೆ.

ಶನಿವಾರಸಂತೆ ಸಮೀಪದ ಹುಲುಸೆ ಗ್ರಾಮದ ಸಣ್ಣಪ್ಪ ಮತ್ತು ಪಾರ್ವತಿ ಅವರ ಪುತ್ರ, ಅವಿವಾಹಿತ ಯುವಕ ಯೋಗೇಶ್(೩೧) ಎಂಬಾತನೇ ಆತ್ಮಹತ್ಯೆಗೆ ಶರಣಾದವನು. ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿರುವ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ್, ಪಾರ್ಲರ್‌ನ ಗೋದಾಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಳೆದ ಏಳು ವರ್ಷಗಳಿಂದ ತೊಕ್ಕೊಟ್ಟಿನ ರಾಯನ್ಸ್ ಕ್ರೀಮ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ. ಪಿಲಾರು ಪಂಜAದಾಯ ದೈವದ ಕ್ಷೇತ್ರದ ಬಳಿಯಿರುವ ಐಸ್‌ಕ್ರೀಮ್ ಗೋದಾಮಿನಲ್ಲಿ ಸ್ನೇಹಿತನೊಂದಿಗೆ ವಾಸವಿದ್ದ ಈತ, ಮೊನ್ನೆ ರಾತ್ರಿ ಒಬ್ಬನೇ ತಂಗಿದ್ದ. ನಿನ್ನೆ ಬೆಳಿಗ್ಗೆ ಸ್ಥಳೀಯ ಯುವಕರು ಗೋದಾಮಿನ ಅಂಗಳದಲ್ಲಿ ಷಟಲ್ ಆಡುತ್ತಿದ್ದ ಸಂದರ್ಭ ಕಿಟಕಿ ತೆರೆದು ಹೊರಗೆ ನೋಡಿದ್ದ ಯೋಗೇಶ್, ಇದಾದ ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭ ಸ್ಥಳದಲ್ಲಿ ಡೆತ್‌ನೋಟ್ ಲಭಿಸಿದೆ. ಇದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಮೃತನ ವಾರಸುದಾರರಿಗೆ ವಿಷಯ ತಿಳಿಸಿ, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬAಧಿಕರಿಗೆ ಹಸ್ತಾಂತರಿಸಲಾಯಿತು. ಹುಲುಸೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತ ಯೋಗೇಶ್ ತಂದೆ ಸೇರಿದಂತೆ ಓರ್ವ ಸಹೋದರಿಯನ್ನು ಅಗಲಿದ್ದಾನೆ.