ಕುಶಾಲನಗರ, ಫೆ. ೧೬: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿವಂಗತ ಎಸ್.ಎನ್. ರಾಜಾರಾವ್ ಅವರಿಗೆ ಸೋಮವಾರಪೇಟೆ ತಹಶೀಲ್ದಾರ್ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಮಾನ್ಯಗೊಳಿಸಿದೆ.

ಜನವರಿ ೧೦ರಂದು ನಡೆದ ಜಿಲ್ಲಾ ಜಾತಿ ಪರಿಶೀಲನ ಸಮಿತಿ ಸಭೆ ತೀರ್ಮಾನದಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಈ ಬಗ್ಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದು, ಜಾತಿ ಪ್ರಮಾಣ ಪತ್ರವನ್ನು ಅಮಾನ್ಯಗೊಳಿಸಬೇಕು ಹಾಗೂ ದಿವಂಗತ ಎಸ್.ಎನ್. ರಾಜಾರಾವ್ ಅವರ ವಾರಿಸುದಾರರು ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಯಾವುದೇ ಸವಲತ್ತುಗಳನ್ನು ಪಡೆಯದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.

ಕೂಡಲೇ ಈ ಬಗ್ಗೆ ವರದಿಯನ್ನು ಕಳುಹಿಸಿಕೊಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಹಶೀಲ್ದಾರ್ ಅವರಿಗೆ ಪತ್ರ ಮೂಲಕ ತಿಳಿಸಿದ್ದಾರೆ.