ಶನಿವಾರಸಂತೆ, ಮಾ. ೩೧: ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆ ಗಾರ ಬಲಿಯಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಳೆಗಾರ ಕಾಂತರಾಜು (೫೧) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರಾಗಿದ್ದಾರೆ.

ಎಂದಿನAತೆ ಇಂದು ಬೆಳಿಗ್ಗೆ ತಮ್ಮ ತೋಟದಲ್ಲಿ ರೋಬಸ್ಟಾ ಕಾಫಿ ಗಿಡಗಳಿಗೆ ನೀರು ಹಾಯಿಸಲು ಸ್ಕೂಟಿಯಲ್ಲಿ ತೆರಳುತಿದ್ದ ಸಂದರ್ಭ ಒಂಟಿ ಕಾಡಾನೆಯೊಂದು ಎದುರಾಗಿ ಬೆನ್ನಟ್ಟಿಕೊಂಡು ಬಂದಿದೆ. ಈ ವೇಳೆ ಕಾಂತರಾಜು ಸ್ಕೂಟಿಯಿಂದ ಇಳಿದು ಓಡಿ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮುಂದಾದರಾದರೂ ರಸ್ತೆಯ ಎರಡೂ ಬದಿ ಬೇಲಿ ಇದ್ದ ಕಾರಣ ತಪ್ಪಿಸಿಕೊಳ್ಳಲಾಗದೆ ಕಾಡಾನೆಯ ದಾಳಿಗೆ ಸಿಲುಕಿದ್ದಾರೆ. ಕಾಡಾನೆ ದಂತ ದಿಂದ ತಿವಿದು ಕಾಂತರಾಜು ಅವ ರನ್ನು ಬಲಿ ತೆಗೆದುಕೊಂಡಿದೆ. ಮೃತರು ಪತ್ನಿ, ಈರ್ವನು ಪುತ್ರಿಯರನ್ನು ಅಗಲಿದ್ದಾರೆ.

(ಮೊದಲ ಪುಟದಿಂದ) ಶಾಸಕ ಡಾ. ಮಂತರ್ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಡಿವೈಎಸ್ಪಿ ಗಂಗಾಧರಪ್ಪ, ಶನಿವಾರಸಂತೆ ಪಿಎಸ್‌ಐ ರವಿಶಂಕರ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಮಾಲಂಬಿ ಉಪ ವಲಯ ಅರಣ್ಯಾಧಿಕಾರಿ ಸೂರ್ಯ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅರಣ್ಯ ಇಲಾಖೆ ವತಿಯಿಂದ ಮೃತರ ಪತ್ನಿ ಲೀಲಾವತಿ ಅವರಿಗೆ ಸ್ಥಳದಲ್ಲೇ ರೂ. ೧೫ ಲಕ್ಷ ಪರಿಹಾರ ನೀಡಲಾಗಿದ್ದು, ಉಪಟಳ ನೀಡುತ್ತಿರುವ ಕಾಡಾನೆಯನ್ನು ಪತ್ತೆಹಚ್ವಿ ಸೆರೆಗೆ ಕೂಡಲೇ ಕ್ರಮಕೈಗೊಳ್ಳಲಾಗುವುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ‘ಶಕ್ತಿ’ಗೆ ತಿಳಿಸಿದ್ದಾರೆ. ಕುಶಾಲನಗರ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಂತ್ಯ ಸಂಸ್ಕಾರ ಸಂಜೆ ಸ್ವಗ್ರಾಮದಲ್ಲಿ ನೆರವೇರಿತು.