ಸುಮಲತಾ ಅವರನ್ನು ಭೇಟಿಯಾದ ಕುಮಾರಸ್ವಾಮಿ

ಬೆಂಗಳೂರು, ಮಾ. ೩೧: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ ಜೆ.ಪಿ. ನಗರದ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಂಬರೀಶ್ ಮನೆ ನನಗೆ ಹೊಸದೇನೂ ಅಲ್ಲ. ನಾನು ಅಂಬರೀಶ್ ಒಟ್ಟಿಗೆ ಬೆಳೆದವರು. ಸುಮಲತಾ ಅವರೊಂದಿಗೆ ಭೇಟಿ ಅತ್ಯಂತ ಸೌಹಾರ್ದಯುತವಾಗಿತ್ತು. ಅವರೊಂದಿಗೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಏಪ್ರಿಲ್ ೪ ರಂದು ನಾಮಪತ್ರ ಸಲ್ಲಿಸಲಿದ್ದು, ಬೆಂಬಲಿಸುವAತೆ ಮನವಿ ಮಾಡಿರುವುದಾಗಿ ತಿಳಿಸಿದರು. ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಕುಮಾರಸ್ವಾಮಿ ಅವರೊಂದಿಗೆ ಆರೋಗ್ಯಕರ ಚರ್ಚೆಯಾಗಿದೆ. ಹಳೆಯದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಕೋರಿದ್ದಾರೆ. ಏಪ್ರಿಲ್ ೩ ರಂದು ಮಂಡ್ಯದಲ್ಲಿ ಸಭೆ ಕರೆದಿರುವ ಬಗ್ಗೆ ಅವರಿಗೆ ಹೇಳಿದ್ದೇನೆ. ಅಂದಿನ ಸಭೆಯಲ್ಲಿ ದರ್ಶನ್, ಅಭಿಷೇಕ್ ಇರಲಿದ್ದು, ಬೆಂಬಲಿಗರು, ಹಿತೈಷಿಗಳೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿರುವುದಾಗಿ ಸುಮಲತಾ ಹೇಳಿದರು.

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ

ನವದೆಹಲಿ, ಮಾ. ೩೧: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಸಮಾವೇಶ ಇಂದು ನಡೆದಿದ್ದು, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಇಂಡಿಯಾ ಮೈತ್ರಿಕೂಟದ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಮದ್ಯ ನೀತಿಗೆ ಸಂಬAಧಿಸಿದAತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಭೂಹಗರಣದ ಸಂಬAಧ ಬಂಧನಕ್ಕೆ ಒಳಗಾಗಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಮುಕ್ತಗೊಳಿಸಬೇಕೆAದು ಪ್ರತಿಪಕ್ಷಗಳು ಈ ಸಭೆಯಲ್ಲಿ ಒತ್ತಾಯಿಸಿವೆ. ದೇಶದ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯಕರು, ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಪ್ರತಿಪಕ್ಷಗಳನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು. ಈ ಸಮಾವೇಶದ ಬಗ್ಗೆ ಲೇವಡಿ ಮಾಡಿರುವ ಪ್ರತಿಪಕ್ಷ ಬಿಜೆಪಿ, ರ‍್ಯಾಲಿಯು ಪ್ರಜಾತಂತ್ರವನ್ನು ಉಳಿಸುವ ಉದ್ದೇಶದಿಂದ ನಡೆದಿಲ್ಲ ಬದಲಾಗಿ "ಕುಟುಂಬವನ್ನು ಉಳಿಸಿ" ಮತ್ತು "ಭ್ರಷ್ಟಾಚಾರವನ್ನು ಮರೆಮಾಡಿ" ಎಂಬ ಉದ್ದೇಶದಿಂದ ನಡೆದಿದೆ ಎಂದು ಹೇಳಿದೆ. ಇದೇ ವೇಳೆ ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕ ವಾದ್ರ ಪ್ರತಿಪಕ್ಷಗಳ ೫ ಬೇಡಿಕೆಗಳನ್ನು ಚುನಾವಣಾ ಆಯೋಗದ ಮುಂದೆ ಇಟ್ಟರು. ಎಲ್ಲರಿಗೂ ಸಮಾನ ಅವಕಾಶಗಳಿರುವುದನ್ನು ಚುನಾವಣಾ ಆಯೋಗ ಖಾತ್ರಿಪಡಿಸಿಕೊಳ್ಳಬೇಕು. ಜಾರಿ ನಿರ್ದೇಶನಾಲಯ, ಸಿಬಿಐಗಳು ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿರುವುದನ್ನು ತಡೆಯಬೇಕು. ಹೇಮಂತ್ ಸೊರೇನ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಯತ್ನಗಳನ್ನು ನಿಲ್ಲಿಸಬೇಕು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಹಣ ಗಳಿಸಿರುವುದರ ಬಗ್ಗೆ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

‘ವಿಕಸಿತ ಭಾರತ' ನಮ್ಮ ಧ್ಯೇಯ - ಮೋದಿ

ಮೀರತ್, ಮಾ. ೩೧: ಈ ಬಾರಿಯ ಲೋಕಸಭಾ ಚುನಾವಣೆಯು ಕೇವಲ ಸರ್ಕಾರ ರಚನೆಗಾಗಿ ಮಾತ್ರ ನಡೆಯುವುದಿಲ್ಲ. ಬದಲಾಗಿ ‘ವಿಕಸಿತ ಭಾರತ'ವನ್ನು ನಿರ್ಮಾಣ ಮಾಡುವುದಕ್ಕಾಗಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜನರು ದೇಶದ ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರ ನೋಡಿದ್ದಾರೆ. ಮುಂದಿನ ಐದು ವರ್ಷಕ್ಕೆ ಬೇಕಾದ ಮಾರ್ಗಸೂಚಿಯನ್ನು ತಮ್ಮ ಸರ್ಕಾರ ಸಿದ್ಧಪಡಿಸುತ್ತಿದೆ' ಎಂದು ತಿಳಿಸಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಮೂರನೇ ಅವಧಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ನಾವು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಯಾರಿಸುತ್ತಿದ್ದೇವೆ. ಮೊದಲ ೧೦೦ ದಿನಗಳಲ್ಲಿ ನಾವು ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂದು ಮೋದಿ ಹೇಳಿದ್ದಾರೆ. ಕಳೆದ ೧೦ ವರ್ಷಗಳಲ್ಲಿ, ನೀವು (ಜನರು) ಅಭಿವೃದ್ಧಿಯ ಟ್ರೇಲರ್ ಅನ್ನು ಮಾತ್ರ ನೋಡಿದ್ದೀರಿ, ಈಗ ನಾವು ದೇಶವನ್ನು ಇನ್ನೂ ಹೆಚ್ಚು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಜ್ಞಾನವ್ಯಾಪಿಯಲ್ಲಿ ಪೂಜೆ-ಇಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ

ನವದೆಹಲಿ, ಮಾ. ೩೧: ಏಪ್ರಿಲ್ ೧ ರಂದು (ಇಂದು) ಸುಪ್ರೀಂಕೋರ್ಟ್ನಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಯಲಿದೆ. ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡುವ ಕೆಲ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯು ಅರ್ಜಿ ಸಲ್ಲಿಸಿದೆ. ಫೆಬ್ರವರಿ ೨೬ರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ವಿಚಾರಣೆ ನಡೆಸಲಿದೆ. ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿದ್ದ ಅಲಹಾಬಾದ್ ಹೈಕೋರ್ಟ್ ನೆಲಮಾಳಿಗೆಯಲ್ಲಿ ಹಿಂದೂ ಕಡೆಯ ಪೂಜೆಯನ್ನು ಮುಂದುವರಿಸಲು ಆದೇಶಿಸಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಲಯವೂ ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ತೀರ್ಪು ನೀಡಿದ್ದು, ಇದರ ವಿರುದ್ಧ ಮುಸ್ಲಿಂ ಕಡೆಯವರು ಅಲಹಾಬಾದ್ ಹೈಕೋರ್ಟ್ನ ಮೊರೆ ಹೋಗಿದ್ದರು.

ರೂ. ೧.೨೦ ಕೋಟಿ ನಗದು-೮೦೦ ಗ್ರಾಂ ಚಿನ್ನಾಭರಣ ವಶಕ್ಕೆ

ಬೆಂಗಳೂರು, ಮಾ. ೩೧: ಐಟಿ ಇಲಾಖೆ ಅಧಿಕಾರಿಗಳು ಇಂದು ಕ್ರಷರ್ ಮಾಲೀಕನ ಮನೆ ಮೇಲೆ ದಾಳಿ ನಡೆಸಿದ್ದು, ರೂ. ೧.೨೦ ಕೋಟಿ ನಗದು ಹಾಗೂ ೮೦೦ ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೃಷ್ಣರಾಜಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಆಪ್ತ ಸಹಾಯಕ ಮಂಜುನಾಥ್ ಎಂಬವರ ಅಳಿಯ ಲೋಕೇಶ್ ಮನೆ ಮೇಲೆ ದಾಳಿ ನಡೆಸಿ ದೊಡ್ಡ ಮಟ್ಟದಲ್ಲಿ ನಗದನ್ನು ಐಟಿ ಇಲಾಖೆ ವಶಕ್ಕೆ ಪಡೆದಿದ್ದಾರೆ. ಇನ್ನು ಕೆಲದಿನಗಳ ಹಿಂದೆ ಗಡಿಭಾಗದ ಚೆಕ್‌ಪೋಸ್ಟ್ನಲ್ಲಿ ಲೋಕೇಶ್ ೧೦ ಲಕ್ಷ ಹಣದ ಜೊತೆ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆ ಅನುಮಾನದಿಂದ ಐಟಿ ಇಲಾಖೆ ಡಿಡಿ ವಿಷ್ಣುಪ್ರಸಾದ್ ನೇತೃತ್ವದಲ್ಲಿ ೬ ಅಧಿಕಾರಿಗಳು ಲೋಕೇಶ್ ನಿವಾಸದ ಮೇಲೆ ದಾಳಿ ನಡೆಸಿತ್ತು.

ಒಂದೆ ಕುಟುಂಬದ ನಾಲ್ವರು ಸಜೀವ ದಹನ

ದ್ವಾರಕಾ, ಮಾ. ೩೧: ಗುಜರಾತ್ ರಾಜ್ಯದ ದ್ವಾರಕಾದಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಏಳು ತಿಂಗಳ ಹೆಣ್ಣು ಮಗು, ಪತಿ-ಪತ್ನಿ ಹಾಗೂ ಅಜ್ಜಿ ಸೇರಿ ಒಂದೆ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಇಂದು ನಸುಕಿನ ಜಾವ ೩ ರಿಂದ ೪ ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಕಿಯಿAದ ದಟ್ಟ ಹೊಗೆ ಆವರಿಸಿದ್ದರಿಂದ ಮನೆಯಲ್ಲಿದ್ದವರು ಉಸಿರುಗಟ್ಟಿ ಬೆಂಕಿಯಲ್ಲೇ ಸಜೀವ ದಹನವಾಗಿದ್ದಾರೆ. ಮೃತರನ್ನು ಪವನ್ ಕಮಲೇಶ್ ಉಪಾಧ್ಯಾಯ (೩೦), ಭಾವನ ಉಪಾಧ್ಯಾಯ (೨೭), ಧ್ಯಾನಾ ಉಪಾಧ್ಯಾಯ (೭ ತಿಂಗಳು) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ. ಬೆಂಕಿಯ ನಂತರ ಮನೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡ ನಂತರ ನಿರ್ಗಮನ ಬಾಗಿಲನ್ನು ಪತ್ತೆಹಚ್ಚಲು ವಿಫಲವಾದ ಕಾರಣ ಕುಟುಂಬ ಸದಸ್ಯರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಟಿ.ಸಿ. ಪಟೇಲ್ ತಿಳಿಸಿದ್ದಾರೆ. ಅಧಿಕ ಬಿಸಿಯಾದ ನಂತರ ಏರ್ ಕಂಡಿಷನರ್‌ನಲ್ಲಿ ಸ್ಫೋಟಗೊಂಡ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಧಿವಿಜ್ಞಾನ ತಜ್ಞರು ಬೆಂಕಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತೊಡಗಿದ್ದಾರೆ.