ಗೋಣಿಕೊಪ್ಪಲು, ಮಾ. ೩೧: ಸ್ವಂತ ತಮ್ಮನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಆರೋಪಿ ಅಣ್ಣನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇಗೂರು ನಿವಾಸಿ ಮಲ್ಲಂಡ ಸುಬ್ರಮಣಿ ಬಂಧಿತ ಆರೋಪಿ. ದಕ್ಷಿಣ ಕೊಡಗಿನ ಬೇಗೂರಿನಲ್ಲಿ ತಾ. ೩೦ ರಂದು ಆರೋಪಿ ಸುಬ್ರಮಣಿ ಹಾಗೂ ಮಲ್ಲಂಡ ಪ್ರಕಾಶ್ ನಡುವೆ ಆಸ್ತಿ ವಿಚಾರದಲ್ಲಿ ಮಾತು ವಿಕೋಪಕ್ಕೆ ತೆರಳಿ ಬಂದೂಕಿನಿAದ ಗುಂಡಿಕ್ಕಿ ಪ್ರಕಾಶ್‌ನನ್ನು ಸುಬ್ರಮಣಿ ಗುಂಡಿಕ್ಕಿ ಹತ್ಯೆಗೈದಿದ್ದಲ್ಲದೆ, ಪ್ರಕಾಶ್ ಪುತ್ರ ಧ್ಯಾನ್ ಮೇಲೂ ಗುಂಡು ತಗುಲಿತ್ತು. ನಂತರ ಗ್ರಾಮದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸುಬ್ರಮಣಿ ಅವಿತುಕೊಂಡಿರುವ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ನಡುರಾತ್ರಿಯಲ್ಲಿ ಬಂಧಿಸಿದ್ದಾರೆ.

ಡಿವೈಎಸ್ಪಿ ಮೋಹನ್ ಕುಮಾರ್ ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ತಡರಾತ್ರಿಯ ವೇಳೆ ಆರೋಪಿ ಇರುವ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರ ತಂಡ ಆತನನ್ನು ವಶಕ್ಕೆ ತೆಗೆದುಕೊಂಡಿದೆ.

(ಮೊದಲ ಪುಟದಿಂದ) ವಿಚಾರಣೆ ನಡೆಸಿದ ವೇಳೆ ಆರೋಪಿ ತನ್ನ ತಪ್ಪನ್ನು ಪೋಲಿಸರ ಮುಂದೆ ಒಪ್ಪಿಕೊಂಡಿದ್ದಾನೆ. ಆಸ್ತಿ ವಿಚಾರದಲ್ಲಿ ಆಗಿಂದಾಗ್ಗೆ ಜಗಳ, ಕಲಹಗಳು ನಡೆಯುತ್ತಿದ್ದವು. ಈ ಹಿನ್ನೆಲೆ ಗುಂಡು ಹಾರಿಸಿರುವುದಾಗಿ ತಿಳಿಸಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯುವ ಮೂಲಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕಾರ್ಯಚರಣೆಯಲ್ಲಿ ಗೋಣಿಕೊಪ್ಪ ಸಿಪಿಐ ಶಿವರಾಜ್ ಮುದೋಳ್ ಪೊನ್ನಂಪೇಟೆ ಎಸ್. ಐ. ನವೀನ್, ಸಿಬ್ಬಂದಿಗಳಾದ ಮಜೀದ್,ಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಮೃತಪಟ್ಟ ಮಲ್ಲಂಡ ಪ್ರಕಾಶ್ ಅಂತ್ಯಕ್ರಿಯೆ ಮಧ್ಯಾಹ್ನ ವೇಳೆ ಬೇಗೂರಿನಲ್ಲಿ ನಡೆಯಿತು. ರಾಜ್ಯ ಸಚಿವರಾದ ವೆಂಕಟೇಶ್, ಮಹದೇವಪ್ಪ, ಶಾಸಕ ಪೊನ್ನಣ್ಣ, ಮಾಜಿ ಎಂ.ಎಲ್.ಎ. ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಗೌಡ ಸೇರಿದಂತೆ ಅನೇಕ ಗಣ್ಯರು ಮಲ್ಲಂಡ ಪ್ರಕಾಶ್ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. - ಹೆಚ್.ಕೆ. ಜಗದೀಶ್