ಮಡಿಕೇರಿ, ಏ. ೧: ಕೊಡಗು ಸೇರಿದಂತೆ ರಾಜ್ಯವು ಬರದ ಬೇಗೆಯಿಂದ ಬೇಯುತ್ತಿದ್ದು, ಬಿಸಿಲಿನ ಹೆಚ್ಚಳದಿಂದಾಗಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಶ್ರೀ ಕಾವೇರಮ್ಮೆ ಕೊಡವ-ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಳೆಗಾಗಿ ತಾ. ೩ರಂದು (ನಾಳೆ) ಕಾವೇರಿ ಸನ್ನಿಧಿಯಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಲಾಗುವುದೆಂದು ಟ್ರಸ್ಟ್ನ ಅಧ್ಯಕ್ಷ ಎಂ.ಬಿ. ದೇವಯ್ಯ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಮಾನವ ಕುಲ ಭವಿಷ್ಯದಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಹಾಗೂ ನಾಡಿನ ಸುಭಿಕ್ಷೆಗಾಗಿ ದೇವರ ಮೊರೆ ಹೋಗುವುದೊಂದೆ ಸೂಕ್ತ ಮಾರ್ಗ ಎಂದು ನಿರ್ಧರಿಸಿ ತಾ. ೩ರಂದು (ನಾಳೆ) ಬೆಳಿಗ್ಗೆ ೯.೩೦ ಗಂಟೆಗೆ ಭಾಗಮಂಡಲ ಭಗಂಡೇಶ್ವರ ಸನ್ನಿಧಿ ಹಾಗೂ ತಲಕಾವೇರಿಯ ಕಾವೇರಿ ಸನ್ನಿಧಿಯಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುವುದು. ಜಿಲ್ಲೆಯ ಎಲ್ಲಾ ಜಾತಿ, ಧರ್ಮಗಳ ಜನತೆ ಈ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಆಹ್ವಾನವಿತ್ತ ದೇವಯ್ಯ ಅರ್ಚಕರ ಸಲಹೆಯಂತೆ ಪೂಜೆಯಲ್ಲಿ ಪಾಲ್ಗೊಳ್ಳುವವರು ಎಳನೀರು ಸಹಿತ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಟಿ.ಎ. ನಂದಕುಮಾರ್, ಟ್ರಸ್ಟಿಗಳಾದ ಮನು, ಕಾವೇರಪ್ಪ, ಎನ್.ಕೆ. ಅಯ್ಯಣ್ಣ, ಸೋಮಯ್ಯ ಉಪಸ್ಥಿತರಿದ್ದರು.