ಶನಿವಾರಸಂತೆ, ಏ. ೧: ಸಮೀಪದ ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಆಂಗ್ಲ ಮಾಧ್ಯಮ ಯುಕೆಜಿ ಮಕ್ಕಳಿಗೆ ಪ್ರಶಸ್ತಿ ಪತ್ರ ಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಮುಖ್ಯ ಶಿಕ್ಷಕಿ ಆಶಾ, ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ವಸಂತ್, ಸದಸ್ಯರಾದ ರೇವಣ್ಣ, ಇಂದ್ರೇಶ್, ಭಗವಾನ್ ಉದ್ಘಾಟಿಸಿದರು.

ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ವಸಂತ್ ಮಾತನಾಡಿ, ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳ ಸದುಪಯೋಗದೊಂದಿಗೆ ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಬೆಳೆಯುತ್ತಿದೆ ಎಂದರು.

ಮುಖ್ಯಶಿಕ್ಷಕಿ ಆಶಾ ಮಾತನಾಡಿ, ಶಾಲೆಯಲ್ಲಿ ೨೫೦ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು ಉತ್ತಮ ಕಂಪ್ಯೂಟರ್ ಲ್ಯಾಬ್ ಸಹ ಇದ್ದು; ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಯುಕೆಜಿಯ ೨೩ ಮಕ್ಕಳಿಗೆ ಪ್ರಶಸ್ತಿಪತ್ರ ಪ್ರದಾನ ಮಾಡಿ ಬೀಳ್ಕೊಡಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಯುಕೆಜಿ ಉಸ್ತುವಾರಿ ಸಮಿತಿ ಸದಸ್ಯರಾದ ಕೆಂಚೇಶ್ವರ, ಶಾಲಾ ಉಸ್ತುವಾರಿ ಸಮಿತಿ ಸದಸ್ಯರಾದ ಮಮತಾ ರಮೇಶ್, ನೂರ್ ಜಾನ್, ಲೋಲಾಕ್ಷಿ, ಶಿಕ್ಷಕ ವೃಂದವರು ಹಾಜರಿದ್ದರು.