ವೀರಾಜಪೇಟೆ, ಏ. ೧: ವೀರಾಜಪೇಟೆಯ ಬಿಟ್ಟಂಗಾಲದ ಅಂಬಟ್ಟಿ ಬಳಿ ಭಾನುವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಯುವಕನೋರ್ವ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆೆ.

ಪೊನ್ನಂಪೇಟೆ ತಾಲೂಕಿನ ಕೋತೂರು ನಿವಾಸಿ ಸತೀಶ್ ಅವರ ಪುತ್ರ ಶ್ರವಣ್ (೨೦) ಮೃತ ದುರ್ದೈವಿ.

ಶ್ರವಣ್ ಬಿಟ್ಟಂಗಾಲದಲ್ಲಿರುವ ತನ್ನ ಸ್ನೇಹಿತನ ಮನೆಗೆ ಬಂದು ಬಳಿಕ ವೀರಾಜಪೇಟೆ ನಗರಕ್ಕೆ ಆಗಮಿಸಿ ಬೈಕ್‌ನಲ್ಲಿ ಮರಳಿ ಹೋಗುವ ಸಂದರ್ಭದಲ್ಲಿ ಬಿಟ್ಟಂಗಾಲ ಸಮೀಪದ ಅಂಬಟ್ಟಿ ರಸ್ತೆಯ ಬಳಿ ತಿರುವಿನಲ್ಲಿ ಅಳವಡಿಸಿದ್ದ ನಾಮಫಲಕಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಬೈಕ್ ಚಾಲನೆ ವೇಳೆ ಯುವಕ ಶ್ರವಣ್ ಹೆಲ್ಮೆಟ್ ಧರಿಸದೆ ಇದ್ದುದ್ದರಿಂದ ತಲೆಯ ಭಾಗಕ್ಕೆ ಪೆಟ್ಟಾಗಿದೆ.

ಇದೇ ಮಾರ್ಗವಾಗಿ ವಾಹನದಲ್ಲಿ ಬರುತ್ತಿದ್ದ ವೀರಾಜಪೇಟೆಯ ಸಂತೋಷ್ ಎಂಬುವವರು ಅಪಘಾತವಾಗಿದ್ದನ್ನು ಗಮನಿಸಿ ಕೂಡಲೇ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತನ್ನ ವಾಹನದಲ್ಲಿ ಕರೆತಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೂ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗೊಂಡ ಹಿನ್ನೆಲೆಯಲ್ಲಿ ಶ್ರವಣ್ ಮೃತಪಟ್ಟಿದ್ದಾನೆ ಎಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ದೃಢ ಪಡಿಸಿದರು.

ಮೃತ ಯುವಕನ ತಂದೆ ಸತೀಶ್ ಅವರು ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸ ಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ವೀರಾಜ ಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಹಸ್ತಾಂತರಿಸ ಲಾಯಿತು.