ಮಡಿಕೇರಿ, ಏ. ೨ : ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರಾ ಮಹೋತ್ಸವ ತಾ. ೩ ರಿಂದ (ಇಂದಿನಿAದ) ತಾ. ೬ರವರೆಗೆ ನಡೆಯಲಿದೆ. ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಹಾಗೂ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಈ ಬಗ್ಗೆ ಮಾಹಿತಿ ನೀಡಿದರು. ದೇವಾಲಯದ ತಂತ್ರಿಗಳಾದ ಕೇರಳ ಪಯ್ಯನೂರಿನ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಕಡವು ಮುತ್ತಪ್ಪ ಕ್ಷೇತ್ರದ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ಇವರುಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ತಾ. ೩ರಂದು (ಇಂದು) ಸಂಜೆ ೬.೩೦ ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ ಪ್ರಸಾದ ಶುದ್ಧಿ ಮತ್ತಿತರ ಪೂಜಾದಿಗಳೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ. ತಾ. ೪ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ೧೦ ಗಂಟೆಗೆ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ೧೧ ಗಂಟೆಗೆ ನಾಗದೇವರಿಗೆ ತಂಬಿಲ ಸಮರ್ಪಣೆ, ೧೧.೩೦ ಗಂಟೆಗೆ ಕಲಶಾಭಿಷೇಕ, ಮ. ೧ ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿರುತ್ತದೆ ಎಂದು ಅವರುಗಳು ತಿಳಿಸಿದರು. ಮುತ್ತಪ್ಪ ಜಾತ್ರಾಮಹೋತ್ಸವ ಪ್ರಯುಕ್ತ ತಾ. ೪ರ ಸಂಜೆ ೪ ಗಂಟೆಗೆ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾದಿ ಹಿರಿಯ ವೈದ್ಯರಾದ ಡಾ. ಎಂ.ಜಿ. ಪಾಟ್ಕರ್, ಮುತ್ತಪ್ಪ ದೇವಾಲಯ ಸ್ಥಾಪಕ ಟ್ರಸ್ಟಿಗಳಾದ ಎಂ.ಕೆ. ರಾಘವನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ ೪.೩೦ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸಲಾಗುತ್ತದೆ. ೫ ಗಂಟೆಗೆ ಶ್ರೀ ಮುತ್ತಪ್ಪ ಕಲಾ ವೇದಿಕೆಯ ಉದ್ಘಾಟನೆ ನಡೆಯಲಿದ್ದು, ಬಿ.ಕೆ. ರವೀಂದ್ರ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ಬಿ.ಹೆಚ್. ಗಣೇಶ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ ೫.೩೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ೬.೩೦ಕ್ಕೆ ಭಗವತಿ ದೇವಿಗೆ ದೀಪಾರಾಧನೆ ಪುಷ್ಪಾರ್ಚನೆ ನೆರವೇರಲಿದೆ. ತಾ. ೫ರಂದು ಸಂಜೆ ೫.೩೦ ಗಂಟೆಗೆ ಗಾಂಧಿ ಮೈದಾನದಿಂದ ಕಲಶ ಹಾಗೂ ತಾಲಪೊಲಿ ಮೆರವಣಿಗೆ ನಡೆಯಲಿದ್ದು, ಮುತ್ತಪ್ಪ ಜಾತ್ರಾ ಮೆರವಣಿಗೆ ಸಮಿತಿ ಅಧ್ಯಕ್ಷ ರಜಿಕೃಷ್ಣಕುಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಎನ್. ಪುರುಷೋತ್ತಮ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾತ್ರಿ ೮.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಎಂ.ವಿ. ವಿಜಯನ್, ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಮತ್ತಿತರರು ಭಾಗವಹಿಸಲಿದ್ದಾರೆ. ತಾ. ೫ರ ಸಂಜೆ ೪ ಗಂಟೆಯಿAದ ತಾ. ೬ರ ಬೆಳಿಗ್ಗೆ ೧೧ ಗಂಟೆವರೆಗೆ ವಿವಿಧ ದೈವ ಕೋಲಗಳು ನಡೆಯಲಿವೆ ಎಂದು ರವೀಂದ್ರ ರೈ ಸುಧೀರ್ ವಿವರಿಸಿದರು.

ಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಸಮಿತಿ ಖಜಾಂಚಿ ಎನ್.ವಿ. ಉನ್ನಿಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ವಿ. ಸುಬ್ರಮಣಿ, ಕಾರ್ಯದರ್ಶಿ ಸದಾಶಿವ ಶೆಟ್ಟಿ, ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್ ಉಪಸ್ಥಿತರಿದ್ದರು.