ಸೋಮವಾರಪೇಟೆ, ಮೇ ೫: ಜಿಲ್ಲೆಯಲ್ಲಿರುವ ಮುರುಘಾ ಮಠಕ್ಕೆ ಸೇರಿದ ಆಸ್ತಿ ಹಾಗೂ ಮಠಗಳಿಗೆ ಆಡಳಿತಾಧಿಕಾರಿ ಹಾಗೂ ಧಾರ್ಮಿಕ ಉಸ್ತುವಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ರಚಿಸಿರುವ ಆಡಳಿತ ಮಂಡಳಿಯ ಆಡಳಿತಾಧಿಕಾರಿಯಾಗಿರುವ ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವಯೋಗಿ ಕಳಸದ್ ಹಾಗೂ ಧಾರ್ಮಿಕ ಉಸ್ತುವಾರಿ ಶ್ರೀಬಸವಕುಮಾರ ಸ್ವಾಮೀಜಿ ಸೇರಿದಂತೆ ಇತರರ ತಂಡ ಜಿಲ್ಲೆಗೆ ಭೇಟಿ ನೀಡಿ ಮಠದ ಆಸ್ತಿಗಳನ್ನು ಪರಿಶೀಲಿಸಿತು.

ಶನಿವಾರಸಂತೆ ಸಮೀಪದದ ಚಂಗಡಹಳ್ಳಿ ಮಠ, ಸೋಮವಾರಪೇಟೆಯ ವಿರಕ್ತ ಮಠ, ಬೇಳೂರು, ಅಭಿಮಠದಲ್ಲಿರುವ ಮುರುಘಾ ಮಠದ ಅಧೀನದಲ್ಲಿರುವ ಆಸ್ತಿಪಾಸ್ತಿ, ಮಠಗಳನ್ನು ಪರಿಶೀಲನೆ ನಡೆಸಿದ ತಂಡ, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿತು. ಮಠಕ್ಕೆ ಸೇರಿದ ಅನೇಕ ಆಸ್ತಿಪಾಸ್ತಿಗಳು ಪರಭಾರೆ, ಒತ್ತುವರಿಯಾಗಿರುವ ಬಗ್ಗೆ ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆ, ತಂಡ ಭೇಟಿ ನೀಡಿ ಪರಿಶೀಲಿಸಿತು.