ಸೋಮವಾರಪೇಟೆ, ಮೇ ೫: ತಾಲೂಕಿನ ಗರಗಂದೂರು ಬಿ. ಗ್ರಾಮದ ಚಿದಾನಂದ ಮತ್ತು ಲತಾ ದಂಪತಿಗಳ ಪುತ್ರಿ, ರಾಷ್ಟçಮಟ್ಟದ ಅಥ್ಲೆಟಿಕ್ಸ್, ಫುಟ್ಬಾಲ್ ಮತ್ತು ಇತರ ಕ್ರೀಡೆಗಳಲ್ಲಿ ಪ್ರಶಸ್ತಿ ಗಳಿಸಿರುವ ಕೆ.ಸಿ. ಪೂರ್ವಿಕ ಅವರನ್ನು ಸೋಮವಾರ ಪೇಟೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಲಯನ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಅಧ್ಯಕ್ಷ ಮಹೇಶ್, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶಾಲಾ ಹಂತದಲ್ಲಿಯೇ ಕ್ರೀಡೆಯತ್ತಲೂ ಆಸಕ್ತಿ ವಹಿಸಿ ಸಾಧನೆ ಮಾಡಿದರೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೆಕಲ್ಲು ನವೀನ್, ವಲಯ ಅಧ್ಯಕ್ಷ ಚಿಟ್ಟಿಮಾಡ ರೋಹಿತ್, ಲಯನ್ಸ್ ಕ್ಲಬ್ ಯಲಹಂಕ ಬೆಂಗಳೂರು ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಜಿತೇಂದ್ರ ಸಿಂಗ್, ಸೋಮವಾರಪೇಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ವೀರಪ್ಪ, ಶಿಕ್ಷಕಿ ರಾಗಿಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು