ಸುಂಟಿಕೊಪ್ಪ, ಮೇ ೧೦: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಪಟ್ಟಣದ ಕೆಲ ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಇಲ್ಲಿನ ಉಲುಗುಲಿ ರಸ್ತೆಯ ಅತ್ತೂರು ತೋಟದ ಬಳಿಯ ೮ ಎಕರೆ ಲೇಔಟ್ ಜಾಗದ ಮಣ್ಣು ಮಳೆಗೆ ಕೊಚ್ಚಿಕೊಂಡು ಉಲುಗುಲಿ ರಸ್ತೆಯಲ್ಲಿರುವ ಕೆಲ ಅಂಗಡಿಗಳಿಗೆ ನುಗ್ಗಿದೆ.

ಕರಿಮೆಣಸು ವ್ಯಾಪಾರಿ ಅಬ್ಬೂಬಕ್ಕರ್ ಎಂಬವರಿಗೆ ಸೇರಿದ ಅಂಗಡಿಗೆ ನೀರು ನುಗ್ಗಿ ಅಂಗಡಿಯಲ್ಲಿದ್ದ ಸುಮಾರು ೫ ಕ್ವಿಂಟಾಲ್ ಮೆಣಸು ನೀರು ನಿಂತು ನಷ್ಟ ಸಂಭವಿಸಿದೆ. ಅಲ್ಲದೆ ಉಲುಗುಲಿ ರಸ್ತೆಯು ಕೆಂಪು ಮಣ್ಣ್ಣು ಮಿಶ್ರಿತ ನೀರಿನಿಂದ ಇತರ ಅಂಗಡಿಗಳಿಗೂ ತೊಂದರೆಯಾಗಿದೆ. ಈ ಭಾಗದಲ್ಲಿ ರಾತ್ರಿ ಸುಮಾರು ೨ ಇಂಚಿಗೂ ಅಧಿಕ ಮಳೆ ಸುರಿದಿದೆ. ಅಲ್ಲದೆ ಈ ರಸ್ತೆಯಲ್ಲಿ ಮಣ್ಣು ಮಿಶ್ರಿತ ನೀರು ಲೇಔಟ್‌ನಿಂದ ಬರುತ್ತಿದ್ದು, ಕೂಡಲೇ ಇಲ್ಲಿನ ಗ್ರಾಮ ಪಂಚಾಯಿತಿ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.