ಕುಶಾಲನಗರ, ಮೇ ೧೦ : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ತಾ. ೧೨ರಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ರವೀಂದ್ರ ರೈ ತಿಳಿಸಿದ್ದಾರೆ.

ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦.೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೇಂಬರ್ ಪ್ರಮುಖರಾದ ಎಸ್.ಕೆ. ಸತೀಶ್, ಪಿ.ಪಿ. ಸತ್ಯನಾರಾಯಣ, ಬಿ. ಅಮೃತ್ ರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಡಿಕೇರಿಯ ವಿಕ್ರಂ ಜಾದೂಗಾರ ಅವರಿಂದ ಮ್ಯಾಜಿಕ್ ಶೋ ನಡೆಯಲಿದೆ. ವರ್ತಕರ ಕುಟುಂಬ ಸದಸ್ಯರಿಗೆ ವಿವಿಧ ರೀತಿಯ ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ೪.೩೦ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಎಲ್.ಎನ್. ಸಂಸ್ಥೆಯ ಎನ್. ವಿಶ್ವನಾಥನ್, ಚೇಂಬರ್‌ನ ಕೊಡಗು ಜಿಲ್ಲಾ ನಿರ್ದೇಶಕ ಎಂ.ಡಿ. ರಂಗಸ್ವಾಮಿ, ಕೆ.ಎಸ್. ರಾಜಶೇಖರ್, ಟಿ.ಆರ್. ಶರವಣಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಕಳದ ವಾಗ್ಮಿ ರಾಜೇಂದ್ರ ಭಟ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗೆ ಕಡಿಮೆ ದರದಲ್ಲಿ ನಿವೇಶನ ನೀಡಿರುವ ಹೆಚ್.ಪಿ. ಯೋಗೀಶ್, ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ಟಿ.ಆರ್. ಶರವಣಕುಮಾರ್, ಚೇಂಬರ್ ಹಿರಿಯ ವರ್ತಕರಾದ ತನ್ವೀರ್ ಅಹಮದ್, ಆರ್.ಬಿ.ರಾವಲ್ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯದರ್ಶಿ ಕೆ.ಎಸ್. ನಾಗೇಶ್ ತಿಳಿಸಿದರು. ಗೋಷ್ಠಿಯಲ್ಲಿ ನಿರ್ದೇಶಕ ಕೆ.ಎನ್. ದೇವರಾಜ್ ಇದ್ದರು.