ಪೊನ್ನಂಪೇಟೆ, ಮೇ ೧೦ : ಕೆಸರಿನೋಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ) ತಾ. ೧೮ ಹಾಗೂ ೧೯ ರಂದು ಶನಿವಾರ ಭಾನುವಾರ ನಡೆಯಲಿದೆ. ತಾ. ೧೧ಕ್ಕೆ ಹಬ್ಬದ ಸಾಂಪ್ರದಾಯಿಕ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ತಾ. ೧೧ರಂದು ಸಂಜೆ ೫ ಗಂಟೆಗೆ ಮೂಕಳೇರ ಐನ್‌ಮನೆ ಸಮೀಪದ ಅಂಬಲದಲ್ಲಿ ಹಬ್ಬಕ್ಕೆ ಕಟ್ಟು ಬೀಳಲಿದೆ. ತಾ. ೧೮ ರಂದು ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಆಚರಣೆ ನಡೆಯಲಿದ್ದು, ನಂತರ ಊರುತಕ್ಕರಾದ ಚಮ್ಮಟೀರ ಕುಟುಂಬದ ಐನ್‌ಮನೆಯಿಂದ ಪೊಲವಪ್ಪ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ಪೊಲವಪ್ಪ ತೆರೆ ಮಚ್ಚಿಯಂಡ ಐನ್‌ಮನೆ ಸಮೀಪದ ಅಂಬಲಕ್ಕೆ ತೆರಳಿ ವಿವಿಧ ಪೂಜಾ ವಿಧಿವಿದಾನಗಳು ಹಾಗೂ ಆಚರಣೆಯೊಂದಿಗೆ ಊರಿನ ವಿವಿಧ ನಿಗದಿತ ಸ್ಥಳಗಳಿಗೆ ತೆರಳಿ ಅಪರಾಹ್ನ ಸುಮಾರು ೩ಗಂಟೆಯ ಸಮಯದಲ್ಲಿ ಜೋಡುಬೀಟಿಯಲ್ಲಿರುವ ಪೊಲವಪ್ಪ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಆಚರಿಸಲಾಗುತ್ತಿದೆ.

ಬೆಳಿಗ್ಗೆಯಿಂದ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಉಪವಾಸ ವೃತ್ತದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಪೊಲವಪ್ಪ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಆಚರಣೆ ಮಾಡುತ್ತಾರೆ. ಇಲ್ಲಿಗೆ ಮಣ್ಣಿನ ನಾಯಿ ಅರ್ಪಿಸುತ್ತಾರೆ. ನಂತರ ವಿವಿಧ ಆಚರಣೆಯ ಬಳಿಕ ಭಕ್ತರು ಹರಕೆ ಕಾಣಿಕೆ ಸಲ್ಲಿಸುತ್ತಾರೆ. ಇಲ್ಲಿಗೆ ಮಾತ್ರ ಮಹಿಳೆಯರು ಬರಬಹುದಾಗಿದ್ದು ನಂತರ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಆಚರಣೆಗೆ ಮಹಿಳೆಯ ಆಗಮನ ನಿಷೇಧವಿದೆ.

ಸಂಜೆ ೫ ಗಂಟೆಯ ನಂತರ ಪೊನ್ನಂಪೇಟೆ, ಗೋಣಿಕೊಪ್ಪ ಮುಖ್ಯ ರಸ್ತೆಯ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅವುಲ್ ಕಾರ್ಯಕ್ರಮ ನಡೆಯಲಿದೆ. ನಂತರ ಇಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಸಾವಿರಾರು ತೆಂಗಿನಕಾಯಿಯನ್ನು ಈಡುಕಾಯಿ ರೂಪದಲ್ಲಿ ಒಡೆಯುತ್ತಾರೆ. ವಿವಿಧ ಆಚರಣೆಯ ಬಳಿಕ ಅಲ್ಲಿಂದ ತೆರಳಿ ಚಮ್ಮಟೀರ ಕುಟುಂಬದ ಐನ್‌ಮನೆಯಿಂದ ರಾತ್ರಿ ಹನ್ನೆರಡು ಗಂಟೆಯೊಳಗೆ ಮನೆಕಳಿ ಹೊರಡಲಿದ್ದು ತಾ. ೧೯ ರಂದು ಮುಂಜಾನೆ ಮಚ್ಚಿಯಂಡ ಕುಟುಂಬದ ಅಂಬಲದಲ್ಲಿ ಮನೆ ಕಳಿ ಮುಗಿಯಲಿದೆ.

ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊAದು ಕುದುರೆ ಹಾಗೂ ದೇವರ ಮೊಗ ಹೊರಡಲಿದ್ದು, ಮಧ್ಯಾಹ್ನ ೩ಗಂಟೆಯ ನಂತರ ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಹಾಗೂ ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸಿ, ವಿವಿಧ ರೀತಿಯ ಆಚರಣೆಯ ಬಳಿಕ ದೇವರ ಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರು ಎರಚಾಟದೊಂದಿಗೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಇಲ್ಲಿ ಹೊರಗಿನ ಊರಿನವರಿಗೆ, ಅತಿಥಿಗಳಿಗೆ, ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೂ ಮುಕ್ತವಾಗಿ ಊರಿನವರೊಂದಿಗೆ ಸಂಭ್ರಮಿಸಲು ಅವಕಾಶವಿದ್ದು, ಅಂತಹವರಿಗೆ ಒಂದೊAದು ಬೆತ್ತ ನೀಡಲಾಗುತ್ತದೆ. ಬೆತ್ತದ ಕೋಲು ಹಿಡಿದವರಿಗೆ ಕೆಸರು ಹಾಕುವಂತಿಲ್ಲ, ಹಾಕಿದರೆ ಅವರಿಗೆ ದಂಡ ಬೀಳುತ್ತದೆ. ಕೆಸರು ಎರಚಾಟದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ ಎಂದು ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿದ್ದಾರೆ.